Publish Date: Wed, 14 Jul 2021 (08:46 IST)
Updated Date: Wed, 14 Jul 2021 (09:07 IST)
ನವದೆಹಲಿ: ಸರ್ಕಾರವೇನೋ ಕೊರೋನಾದಿಂದ ಪಾರಾಗಲು ಲಸಿಕೆ ಹಾಕಿಸಿಕೊಳ್ಳಲಿ ಎಂದು ಅಭಿಯಾನ ನಡೆಸುತ್ತಿದೆ. ಆದರೆ ಜನರಿಗೆ ಮಾತ್ರ ಸರಿಯಾಗಿ ಲಸಿಕೆಯೇ ಸಿಗುತ್ತಿಲ್ಲ.
ಬೆಂಗಳೂರಿನಂತಹ ಮಹಾನಗರದಲ್ಲೇ ಬೆರಳೆಣಿಕೆಯ ಲಸಿಕಾ ಕೇಂದ್ರಗಳಿವೆ. ಈ ಲಸಿಕಾ ಕೇಂದ್ರಗಳಿಗೆ ಬರುವುದು ಕೆಲವೇ ಡೋಸ್ ಲಸಿಕೆ. ಇದರಿಂದಾಗಿ ಜನ ಲಸಿಕೆಗಾಗಿ ಬೆಳ್ಳಂ ಬೆಳಿಗ್ಗೆ ಕ್ಯೂ ನಿಲ್ಲಬೇಕು. ನಿತ್ಯದ ಕೆಲಸ, ಕಚೇರಿಗೆ ಹೋಗುವವರಿಗೆ ಇದು ದೊಡ್ಡ ತಲೆನೋವು.
ಇದೀಗ ಲಸಿಕೆಯ ಕೊರತೆಯೂ ಕಾಡಿದ್ದು, ಕೆಲವೆಡೆ ಲಸಿಕಾ ಕೇಂದ್ರಗಳೇ ಬಾಗಿಲು ಮುಚ್ಚಿವೆ. ಸರ್ಕಾರವೇನೋ ಉಚಿತವಾಗಿ ಲಸಿಕೆ ನೀಡುತ್ತೇವೆ ಎಂದು ಘೋಷಿಸಿದರೂ ಕೇಂದ್ರಗಳಿಗೆ ಲಸಿಕೆಯೇ ಬರುತ್ತಿಲ್ಲ. ಕೊವಿನ್, ಆರೋಗ್ಯ ಸೇತು ಅಪ್ ಗಳಲ್ಲಿ ನೊಂದಾಯಿಸಿ ದಿನಗಟ್ಟಲೇ ಕಾದರೂ ತಮ್ಮ ಸರದಿ ಬರುತ್ತಿಲ್ಲ. ಆದರೆ ಖಾಸಗಿ ಕೇಂದ್ರಗಳಲ್ಲಿ ಮಾತ್ರ ಲಸಿಕೆ ಲಭ್ಯವಿದೆ. ಆದರೆ ನೂರಾರು ರೂಪಾಯಿ ಕೊಟ್ಟು ಖಾಸಗಿ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಎಲ್ಲರಿಗೂ ಸಾಧ್ಯವಿಲ್ಲ. ಹೀಗಾಗಿ ಮಹಾನಗರಗಳಲ್ಲಿ ಲಸಿಕೆ ಕೇಂದ್ರ ಹೆಚ್ಚಿಸಿ, ಲಸಿಕೆ ಸೂಕ್ತ ಸಮಯಕ್ಕೆ ಸಿಗುವಂತೆ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ.