Publish Date: Fri, 27 May 2022 (10:09 IST)
Updated Date: Fri, 27 May 2022 (10:10 IST)
ಹೈದರಾಬಾದ್ : ತೆಲಂಗಾಣ ರಾಜಧಾನಿಗೆ ಆಗಮಿಸುತ್ತಿದ್ದರೂ ತಮ್ಮನ್ನು ಸ್ವಾಗತಿಸದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಭೇಟಿಗಾಗಿ ಬೆಂಗಳೂರಿಗೆ ತೆರಳಿದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟಾಂಗ್ ನೀಡಿದ್ದಾರೆ.
ಕುಟುಂಬಗಳು ನಡೆಸುವ ಪಕ್ಷಗಳು ಯಾವಾಗಲೂ ತಮ್ಮ ಪ್ರಗತಿಯ ಬಗ್ಗೆ ಮಾತ್ರವೇ ಯೋಚಿಸುತ್ತಿರುತ್ತವೆ. ಹೀಗಾಗಿ ಅಂತಹ ಪಕ್ಷಗಳು ದೇಶದ ಅತಿದೊಡ್ಡ ಶತ್ರುಗಳು ಎಂದು ಹರಿಹಾಯ್ದಿದ್ದಾರೆ.
ಬೇಗಂಪೇಟ್ ವಿಮಾನ ನಿಲ್ದಾಣದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿವಾರವಾದಿ ಪಕ್ಷಗಳು ರಾಜಕೀಯಕ್ಕಷ್ಟೇ ಸಮಸ್ಯೆ ಅಲ್ಲ. ಈ ದೇಶದ ಪ್ರಜಾಪ್ರಭುತ್ವ ಹಾಗೂ ಯುವಶಕ್ತಿಗೂ ಅಪಾಯಕಾರಿ.
ಕುಟುಂಬಗಳು ಮುನ್ನಡೆಸುವ ಪಕ್ಷಗಳು ಯಾವ ರೀತಿ ತಮ್ಮ ಅನುಕೂಲಕ್ಕೆ ಕಾಳಜಿ ವಹಿಸುತ್ತಿವೆ ಎಂಬುದನ್ನು ತೆಲಂಗಾಣದ ಜನತೆ ನೋಡುತ್ತಿದ್ದಾರೆ. ಈ ಪಕ್ಷಗಳು ಬಡ ಜನರ ಸಮಸ್ಯೆಗಳ ಬಗ್ಗೆ ಎಂದಿಗೂ ಚಿಂತೆ ಪಡುವುದಿಲ್ಲ. ಕುಟುಂಬಕ್ಕೆ ಸಮರ್ಪಿತವಾದ ಪಕ್ಷಗಳಿಗೆ ಭ್ರಷ್ಟಾಚಾರ ಎಂಬುದು ಹೇಗೆ ಮುಖವಾಗಿದೆ ಎಂಬುದನ್ನು ಈ ದೇಶ ನೋಡಿದೆ ಎಂದು ಚಾಟಿ ಬೀಸಿದರು.
ಪ್ರತ್ಯೇಕ ತೆಲಂಗಾಣ ರಾಜ್ಯ ಪರ ದಶಕಗಳ ಕಾಲ ನಡೆದ ಹೋರಾಟ ನಡೆದಿತ್ತು. ಉಜ್ವಲ ಭವಿಷ್ಯಕ್ಕಾಗಿ ಸಹಸ್ರಾರು ಮಂದಿ ಪ್ರಾಣಾರ್ಪಣೆ ಮಾಡಿದರು. ಆ ಪ್ರತಿಭಟನೆ ನಡೆಸಿದ್ದು ತೆಲಂಗಾಣ ಅಭಿವೃದ್ಧಿಯ ಕನಸನ್ನು ಧ್ವಂಸಗೊಳಿಸುವ ಒಂದು ಕುಟುಂಬದ ಪರವಾಗಿ ಅಲ್ಲ ಎಂದು ಹೇಳಿದರು.