Publish Date: Tue, 01 Mar 2022 (10:47 IST)
Updated Date: Tue, 01 Mar 2022 (10:49 IST)
ಮನೆ ಬಿಟ್ಟು ಬಂದಿದ್ದ ಬಾಲಕಿಯನ್ನು ಪುಸಲಾಯಿಸಿದ ನಾಲ್ವರು ದುಷ್ಕರ್ಮಿಗಳು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು.
ತಾಲೂಕಿನ ಹುದುಕುಳ ಗ್ರಾಮದ 9ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ತನ್ನ ಜನ್ಮದಿನವಾದ ಶುಕ್ರವಾರ ಹೊಸ ಬಟ್ಟೆ ಹಾಗೂ ಚಾಕ್ಲೇಟ್ಸ್ ಕೊಡಿಸಿಲ್ಲವೆಂದು ಪೋಷಕರ ವಿರುದ್ಧ ಮುನಿಸಿಕೊಂಡು ಶಾಲೆಗೂ ಹೋಗದೆ, ಮನೆಯವರಿಗೂ ತಿಳಿಸದೆ ಬಸ್ ಹತ್ತಿ ಬಂಗಾರಪೇಟೆಗೆ ಬಂದಿದ್ದಳು.
ಬಸ್ ನಿಲ್ದಾಣದಲ್ಲಿ ಒಬ್ಬಳೇ ಕುತಿಳಿದ್ದ ವಿದ್ಯಾರ್ಥಿನಿಯನ್ನು ಗಮನಿಸಿದ ನಾಲ್ವರು ದುಷ್ಕರ್ಮಿಗಳು ಆಕೆಯನ್ನು ಪುಸಲಾಯಿಸಿ ಪಾರ್ಕ್ಗೆ ಕರೆದುಕೊಂಡು ಹೋಗಿ ಸಂಜೆವರೆಗೂ ಕಾಲ ಕಳೆದಿದ್ದಾರೆ.
ಬಳಿಕ ಪಟ್ಟಣದಿಂದ ಆಂಧ್ರಗಡಿಗೆ ಅಂಟಿಕೊಂಡಿರುವ ತನಿಮಡಗು ಗ್ರಾಮಕ್ಕೆ ಖಾಸಗಿ ಬಸ್ನಲ್ಲಿ ಕರೆದುಕೊಂಡು ಹೋಗಿದ್ದಾರೆ. ರಾತ್ರಿ ಗಡಿಯಲ್ಲಿರುವ ಬಾರ್ನಲ್ಲಿ ನಾಲ್ವರು ಆರೋಪಗಳು ಕುಡಿದು ಬಳಿಕ ಸುತ್ತಮುತ್ತಲಿರುವ ನಿರ್ಜನ ಪ್ರದೇಶದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಈ ವೇಳೆ ಬಾಲಕಿಯ ಕಿರುಚಾಟ ಕೇಳಿದ ದಾರಿಹೋಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಬಾಲಕಿಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.