Publish Date: Sun, 24 Jul 2022 (07:29 IST)
Updated Date: Sun, 24 Jul 2022 (09:31 IST)
ನವದೆಹಲಿ : ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಗೋವಾದಲ್ಲಿ ಅಕ್ರಮ ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿ,
ಸ್ಮೃತಿ ಇರಾನಿ ಅವರನ್ನು ತಮ್ಮ ಸ್ಥಾನದಿಂದ ವಜಾ ಗೊಳಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶನಿವಾರ ಕಾಂಗ್ರೆಸ್ ಒತ್ತಾಯಿಸಿದೆ.
ಕಾಂಗ್ರೆಸ್ ವಕ್ತಾರ ಪವನ್ ಖೇರಾ ಈ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಇರಾನಿ ಅವರ ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪಗಳಿವೆ. ಅವರ ಮಗಳು ಗೋವಾದಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ನಕಲಿ ಪರವಾನಗಿ ಮೇಲೆ ಬಾರ್ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಸ್ಮೃತಿ ಇರಾನಿ ಅವರ ಮಗಳ ಪರವಾನಗಿಯು ಮೇ 2021 ರಲ್ಲಿ ನಿಧನರಾದ ವ್ಯಕ್ತಿಯ ಹೆಸರಿನಲ್ಲಿದೆ. ಆ ಪರವಾನಗಿಯನ್ನು 2022 ರ ಜೂನ್ನಲ್ಲಿ ಗೋವಾದಲ್ಲಿ ತೆಗೆದುಕೊಳ್ಳಲಾಗಿದೆ. ಆದರೆ ಪರವಾನಗಿಯಲ್ಲಿರುವ ಹೆಸರಿನ ವ್ಯಕ್ತಿ 13 ತಿಂಗಳ ಹಿಂದೆ ಸಾವನ್ನಪ್ಪಿದ್ದಾರೆ. ಇದು ಕಾನೂನುಬಾಹಿರ ಎಂದು ಆರೋಪಿಸಿದ್ದಾರೆ.
ಸ್ಮೃತಿ ಇರಾನಿ ಅವರ ಪುತ್ರಿ ಕಿರಾತ್ ನಾಗ್ರಾ ಗೋವಾದಲ್ಲಿ ಅಕ್ರಮ ಬಾರ್ ಹೊಂದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಿದ್ದರೂ ಅವರ ಪರ ವಕೀಲರು ಇದು ಸುಳ್ಳು ಆರೋಪ ಎಂದು ಹೇಳಿಕೆ ನೀಡಿದ್ದಾರೆ.