Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನವದೆಹಲಿ: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಸಮರ ನಡೆಯುತ್ತಿದ್ದರೆ, ಕಾಂಗ್ರೆಸ್ ಪ್ಯಾಲೆಸ್ತೀನಿಗಳಿಗೆ ಬೆಂಬಲ ಕೊಟ್ಟಿದೆ. ಇದರ ಬಗ್ಗೆ ಬಿಜೆಪಿ ಕಟು ಟೀಕೆ ಮಾಡಿದೆ.
ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಪ್ಯಾಲೆಸ್ತೀನಿಗಳಿಗೆ ಬೆಂಬಲ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಪ್ಯಾಲೆಸ್ತೀನಿಗಳು ಸ್ವತಂತ್ರ ಭೂಮಿ, ಸರ್ಕಾರ ರಚನೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ಬೆಂಬಲ ನೀಡಲಾಗುತ್ತದೆ ಎಂದು ಸಿಡಬ್ಲ್ಯುಸಿ ನಿರ್ಣಯ ಕೈಗೊಂಡಿದೆ. ಈ ಕೂಡಲೇ ಯುದ್ಧ ನಿಲ್ಲಿಸಿ ಕದನ ವಿರಾಮ ಘೋಷಣೆಯಾಗಬೇಕು ಎಂದು ಒತ್ತಾಯಿಸಲಾಗಿದೆ.
ಆದರೆ ಕಾಂಗ್ರೆಸ್ ನಿಲುವನ್ನು ಬಿಜೆಪಿ ಕಟು ಶಬ್ಧಗಳಲ್ಲಿ ಟೀಕೆ ಮಾಡಿದೆ. ಭಯೋತ್ಪಾದಕರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತದೆಯಾ ಎಂಬ ಸಂಶಯಕ್ಕೆ ಇದು ಪರಿಹಾರ ನೀಡಿದಂತಾಗಿದೆ. ಉಗ್ರರ ದಾಳಿಯನ್ನು ಖಂಡಿಸುವ ಬದಲು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮೂಲಕ ಟೀಕೆ ಮಾಡಿದ್ದಾರೆ.