Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಪ್ರವಾಸಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಮಚ್ಚಿನಿಂದ ಕೊಚ್ಚಿ ಕೊಂದಿದ್ದೂ ಅಲ್ಲದೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈಯ್ಯಲು ಯತ್ನಿಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದ ಗೆಳತಿ ಗುಡ್ಡದಲ್ಲಿ ನಡೆದಿದೆ.
ಬೆಂಗಳೂರಿನ ಗೊಲ್ಲರಹಟ್ಟಿಯ ಬಸವರಾಜು ಈ ಕೃತ್ಯ ಎಸಗಿದ್ದು, ಪ್ರಭಾ ಎಂಬ ಮಹಿಳೆ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.
ಮಹಿಳೆ ಪತಿ ಕಳೆದ ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ ತನ್ನ ಇಬ್ಬರು ಗಂಡು ಮಕ್ಕಳನ್ನು ಊರಿನಲ್ಲಿಯೇ ಬಿಟ್ಟು ಮಹಿಳೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಬೆಂಗಳೂರಿನ ಗೊಲ್ಲರಹಟ್ಟಿಯ ಬಸವರಾಜು ಪರಿಚಯವಾಗಿದ್ದು, ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಬಸವರಾಜು ಗಾರೆ ಕೆಲಸದ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದರು. ನಂತರ ಕೆಲ ತಿಂಗಳ ಹಿಂದೆ ನಾನು ಊರಿಗೆ ಹೋಗುತ್ತೇನೆ ಎಂದು ಹೇಳಿದಾಗ ಬಸವರಾಜು ಆಕೆಗೆ ಊರಿನಲ್ಲಿಯೇ ಒಂದು ಮನೆ ಮಾಡಿಕೊಟ್ಟಿದ್ದ.
ಗುರುವಾರ ಬಸವರಾಜು ಬೈಕ್ನಲ್ಲಿ ಮಹಿಳೆಯನ್ನು ಕರೆದುಕೊಂಡು ಮಹದೇಶ್ವರ ಬೆಟ್ಟ ಸೇರಿದಂತೆ ಹಲವು ಸ್ಥಳಗಳಿಗೆ ಹೋಗಿ ಸುತ್ತಾಡಿಕೊಂಡು ಬಂದಿದ್ದಾನೆ. ನಂತರ ಮೈಸೂರಿನಲ್ಲಿ ಎರಡು ದಿನಗಳ ಕಾಲ ಲಾಡ್ಜ್ವೊಂದರಲ್ಲಿ ಇಬ್ಬರು ತಂಗಿದ್ದರು. ಭಾನುವಾರ ನಾಗಮಂಗಲದ ಸೂಳೆಕೆರೆ ಸಮೀಪವಿರುವ ಗೆಳತಿ ಗುಡ್ಡಕ್ಕೆ ಇಬ್ಬರು ಹೋಗಿದ್ದಾರೆ. ಅಲ್ಲದೇ ದಾರಿಯ ಮಧ್ಯದಲ್ಲಿ ತಿಂಡಿ ಹಾಗೂ ಪೆಟ್ರೋಲ್ನ್ನು ಸಹ ತೆಗೆದುಕೊಂಡಿದ್ದಾರೆ.
ಗೆಳತಿ ಗುಡ್ಡಕ್ಕೆ ತಲುಪಿದ ಬಳಿಕ ತಿಂಡಿ ತಿನ್ನುತ್ತಿದ್ದ ಮಹಿಳೆ ಮೇಲೆ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಕೆಳಕ್ಕೆ ಬಿದ್ದು ಒದ್ದಾತ್ತದ ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿಯಿಂದ ನರಳಾಡಿಕೊಂಡು ರಸ್ತೆ ಬಳಿ ಬಂದ ಮಹಿಳೆಯನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಸವರಾಜು ಮಹಿಳೆಗೆ 3 ಲಕ್ಷ ಹಣ ಕೊಡಬೇಕಿತ್ತು. ಈ ಕಾರಣಕ್ಕೆ ಕೃತ್ಯ ಎಸಗಿದ್ದಾನೆ ಎಂದು ಮಹಿಳೆಯ ಸಂಬಂಧಿಕರು ಹೇಳಿದ್ದಾರೆ. ಇನ್ನೊಂದೆಡೆ ಪ್ರಭಾ ಬೇರೆಯೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದರಿಂದ ಹೀಗೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.