Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಶಿವಮೊಗ್ಗ : ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರಲ್ಲೇ ಹೇಯಕೃತ್ಯವೊಂದು ನಡೆದಿದೆ.
ಹೆಂಡತಿಯ ಅಪ್ರಾಪ್ತ ತಂಗಿಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ಶಿವಮೊಗ್ಗದ ಜಿಲ್ಲೆಯಲ್ಲಿ ನಡೆದಿದೆ. ತನ್ನ ಪತ್ನಿಯ ಅಪ್ರಾಪ್ತ ತಂಗಿಯನ್ನು ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಜಿಲ್ಲೆಯ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಿಶ್ವ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಯು ಸಾಗರ ತಾಲೂಕಿನ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಈ ಮಹಿಳೆಗೆ ತಂದೆ ಇಲ್ಲದ ಕಾರಣ, ಆಕೆಯ ತಾಯಿ ಹಾಗೂ ತಂಗಿಯನ್ನು ಆರೋಪಿ ತನ್ನ ಮನೆಯಲ್ಲಿಯೇ ಇರಿಸಿಕೊಂಡಿದ್ದ. ಎಲ್ಲರೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಹೆಂಡತಿಯ ತಂಗಿಯ ಜೊತೆ ವಿಶ್ವ ಸಲುಗೆ ಬೆಳೆಸಿ, ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಗರ್ಭಿಣಿಯಾಗಿದ್ದ ಈಕೆಗೆ ಹೊಟ್ಟೆ ನೋವು ಕಂಡು ಬಂದು ಮನೆಯಲ್ಲಿಯೇ ಮಗು ಜನನವಾಗುತ್ತದೆ. ಮಗುವನ್ನು ಆರೋಪಿ ವಿಶ್ವ ಮನೆಯ ಹಿತ್ತಲಿನಲ್ಲಿಯೇ ಹೂತು ಹಾಕಿದ್ದು, ಮನೆಯವರೇ ಈ ದುಷ್ಕೃತ್ಯಕ್ಕೆ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ.