Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಸುಮಾರು 11, 12 ದಿನ ಮನೇಲಿದ್ದೆ, ಕ್ವಾರಂಟೈನೂ ಮುಗಿದಿದೆ. ಇಂದಿನಿಂದ ಕಚೇರಿಯಲ್ಲಿ ಕೆಲಸ ಮಾಡ್ತೇನೆ. ನಿನ್ನೆ ಡಿಸಿಗಳ ಜೊತೆ ಸಭೆ ನಡೆಸಿದ್ದೇನೆ. ಹಾಲಿ ನಿರ್ಬಂಧಗಳ ಪುನರ್ ಪರಿಶೀಲನೆ ಹಾಗೂ ಲಸಿಕೆ ಬಗ್ಗೆ ವಿಶೇಷ ಗಮನ ಕೊಡಲು ಸೂಚಿಸಿದ್ದೇನೆ. ಶುಕ್ರವಾರ ಮತ್ತೆ ತಜ್ಞರ ಜೊತೆಗೆ ಸಭೆ ಮಾಡ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ವೀಕೆಂಡ್ ಕರ್ಫ್ಯೂ ವಾಪಸ್, ನಿರ್ಬಂಧಗಳ ಸಡಿಲಿಕೆ ಬಗ್ಗೆ ತಜ್ಞರ ಅಭಿಪ್ರಾಯದಂತೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಜನವರಿ ಅಂತ್ಯಭಾಗದಿಂದ ಫೆಬ್ರವರಿ ಮಧ್ಯಭಾಗದವರೆಗೂ ಕೋವಿಡ್ ಹೆಚ್ಚಾಗುತ್ತೆ ಅಂತ ತಜ್ಞರು ಅಂದಾಜು ಮಾಡಿದ್ದಾರೆ. ಕಾಂಗ್ರೆಸ್ ನವರು ದೂರು ಕೊಡುವ ಅಗತ್ಯ ಇಲ್ಲ, ಯಾರೇ ಕೋವಿಡ್ ನಿಯಮ ಉಲ್ಲಂಘಿಸಿದರೂ ಖಂಡಿತಾ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವ ಖಡಕ್ ಸೂಚನೆ ನೀಡಿದ್ದಾರೆ.
ಹೋಂ ಐಸೋಲೇಷನ್ನಲ್ಲಿ 94% ಸೋಂಕಿತರು ಇದ್ದಾರೆ. ಇವರ ಮೇಲೆ ಹೆಚ್ಚಿನ ಗಮನ ಕೊಡಲು ಸೂಚಿಸಲಾಗಿದೆ. ಬೂಸ್ಟರ್ ಡೋಸ್ ಕಡೆ ಗಮನ ಕೊಡಲು ಸೂಚಿಸಿದ್ದೇನೆ. ಜಿಲ್ಲಾಡಳಿತಗಳಿಗೆ ಈ ಎಲ್ಲ ಸೂಚನೆ ನೀಡಲಾಗಿದೆ. ಕೊರೊನಾ ವಾರಿಯರ್ಸ್ ಬಗ್ಗೆ ತೀವ್ರ ಗಮನ ಕೊಡಲು ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಫೆಬ್ರವರಿ ಮಧ್ಯಭಾಗದಲ್ಲಿ ಪೀಕ್ಗೆ ಹೋಗುತ್ತೆ ಅಂತ ಬೇರೆ ಬೇರೆ ದೇಶಗಳ ಟ್ರೆಂಡ್ ನೋಡಿ ಅಂದಾಜು ಮಾಡಿದ್ದಾರೆ. ಎಲ್ಲರೂ ಏನ್ ಚರ್ಚೆ ಮಾಡ್ತಿದಾರೆ ಅಂದ್ರೆ, ಈಗ ಕೋವಿಡ್ ಫ್ಲೂ ಥರ ಬಂದು ಹೋಗುತ್ತೆ. ಆಸ್ಪತ್ರೆಗಳಿಗೂ ಹೆಚ್ಚು ದಾಖಲಾತಿ ಆಗ್ತಿಲ್ಲ. ಹೀಗಾಗಿ ನಾವು ದೈನಂದಿನ ಕೆಲಸಗಳನ್ನು ಮಾಡ್ಕೋಬಹುದು ಅನ್ನೋ ಭಾವನೆ ಇದೆ. ಈ ಹಿನ್ನೆಲೆಯಲ್ಲಿ ನಿಯಮಗಳ ಸಡಿಲಿಕೆ ಬಗ್ಗೆ ತಜ್ಞರು ಪರಾಮರ್ಶೆ ಮಾಡುತ್ತಿದ್ದಾರೆ. ಶುಕ್ರವಾರದ ಸಭೆಯಲ್ಲಿ ತಜ್ಞರ ಜತೆ ಚರ್ಚಿಸಿ ತಜ್ಞರ ಸಲಹೆಯಂತೆ ಸಡಿಲಿಕೆ ಬಗ್ಗೆ ಕ್ರಮ ತೆಗೆದುಕೊಳ್ಳುತೇವೆ ಎಂದಿದ್ದಾರೆ.