Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡ ರಾತ್ರಿ ಗಾಂಜಾ ಮತ್ತಿನಲ್ಲಿ ಅಪ್ರಾಪ್ತ ಬಾಲಕರು ಗೂಂಡಾಗಿರಿ ನಡೆಸಿದ ಘಟನೆ ನಡೆದಿದೆ.
ಸದ್ಯ ಗಾಂಜಾ ಮತ್ತಿನಲ್ಲಿ ಹಾವಳಿ ಕೊಡುತ್ತಿದ್ದ ಪುಂಡರನ್ನು ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೀಸೆಚಿಗುರದ ಹುಡುಗರು ಗಾಂಜಾ ಮತ್ತಿನಲ್ಲಿ ಮಾಡುವ ಪುಂಡಾಟ ಒಂದೆರೆಡಲ್ಲ. ಸದಾ ಗಾಂಜಾ ಮತ್ತಿನಲ್ಲೇ ಇರುತ್ತಿದ್ದ ಅಪ್ರಾಪ್ತ ಹುಡುಗರು ರಾತ್ರಿ ವೇಳೆ ಮನೆಗಳ ಮೇಲೆ ಕಲ್ಲೆಸೆಯುವುದು. ಬೈಕ್ಗಳನ್ನು ಅಡ್ಡಗಟ್ಟಿ ರಾಬರಿ ಮಾಡುವುದು. ನಿರ್ಮಾಣ ಹಂತದ ಕಟ್ಟಡದೊಳಗೆ ನುಗ್ಗಿ ಪುಂಡಾಟ ಮಾಡುವುದು. ಹಗಲಿನ ವೇಳೆ ವೃದ್ಧರ ಮೇಲೆ ಲಾಂಗ್ ಬೀಸುವುದು. ಜನರ ಜೇಬಿನಲ್ಲಿ ಇದ್ದ ಹಣ ಎಗರಿಸಿ ಪರಾರಿಯಾಗುವುದು. ಬೇಕರಿಯ ಬೀಗ ಒಡೆದು ಒಳನುಗ್ಗಿ ಕಳ್ಳತನ ಮಾಡುವುದು. ಹೀಗೆ ಅನೇಕ ಅಪರಾದಗಳನ್ನು ಮಾಡುತ್ತಾ ಬಂದಿದ್ದಾರೆ.
ಸದ್ಯ ಗಾಂಜಾ ಮತ್ತಿನಲ್ಲಿ ಗೂಂಡಾಗಿರಿ ಮಾಡುತ್ತಿದ್ದ ಮೂವರು ಅಪ್ರಾಪ್ತರ ಗ್ಯಾಂಗ್ನನ್ನು ಪುಲಕೇಶಿನಗರ ಠಾಣೆ ಪೊಲೀಸರು ಅರೆಸ್ಟ್ ಮಾಡಿ ಆರೋಪಿಗಳನ್ನು ಬಾಲಮಂದಿರಕ್ಕೆ ಕಳಿಸಿದ್ದಾರೆ.
ಬೈಕ್ಗಳ ಕರ್ಕಶ ಶಬ್ದಕ್ಕೆ ನಾಯಿ ಬೊಗಳಿದ ಹಿನ್ನೆಲೆ, ಅದೇ ರಸ್ತೆಯ ಕನ್ಟ್ರಕ್ಷನ್ ಬಿಲ್ಡಿಂಗ್ನಿಂದ ರಾಡ್ ತಂದ ಸವರಾರು, ರಾಡ್ನಿಂದ ಹೊಡೆದು ನಾಯಿಯನ್ನು ಸಾಯಿಸಿದ್ದಾರೆ. ಬೈಕ್ನಲ್ಲಿ ಹೋಗುತ್ತಿದ್ದಂತೆ ನಾಯಿ ಮೇಲೆ ರಾಡ್ ಬೀಸಿ ಹಲ್ಲೆ ಮಾಡಿದ್ದಾರೆ. ದುಷ್ಕರ್ಮಿಗಳ ಕೃತ್ಯಕ್ಕೆ ಸ್ಥಳದಲ್ಲೇ ಶ್ವಾನ ಸಾವನ್ನಪ್ಪಿದೆ.
ಇತ್ತಿಚಿಗೆ ಗಾಂಜಾ ಅಡ್ಡೆಯಾಗಿ ಈ ಸ್ಥಳ ಬದಲಾಗಿದೆ. ಆರೋಪಕ್ಕೆ ಪುಷ್ಟಿ ನೀಡುವಂತೆ ಒಂದರ ನಂತರ ಮತ್ತೊಂದು ಘಟನೆ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸದ್ಯ ನಾಯಿಯ ಮೇಲೆ ನಡೆದ ಭೀಕರ ಹಲ್ಲೆ ವಿಡಿಯೋ ಸಹ ವೈರಲ್ ಆಗಿದೆ.