Publish Date: Sat, 10 Aug 2019 (17:29 IST)
Updated Date: Sat, 10 Aug 2019 (17:31 IST)
ಪ್ರವಾಹದಲ್ಲಿ ಸಿಲುಕಿಕೊಂಡಿರೋ ಜನರಿಗೆ ಹಾಗೂ ನೆರೆ ಸಂತ್ರಸ್ಥರಿಗೆ ಹಾಲಿನ ಪ್ಯಾಕೆಟ್ ನಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ.
ಪ್ರವಾಹದಲ್ಲಿ ಸಿಲುಕಿಕೊಂಡಿರುವ ಜನರಿಗೆ ಆಹಾರ ಪೊಟ್ಟಣಗಳ ಜತೆ ಬಾಟಲ್ ಗಳ ಬದಲಿಗೆ ನಂದಿನಿ ಹಾಲಿನ ಖಾಲಿ ಪ್ಯಾಕೆಟ್ ಗಳಲ್ಲಿ ಕುಡಿಯುವ ಶುದ್ಧ ನೀರು ತುಂಬಿಸಿ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಹೆಲಿಕಾಪ್ಟರ್ ಮೂಲಕ ಆಹಾರ ಪೊಟ್ಟಣಗಳ ಜತೆ ನೀರಿನ ಬಾಟಲ್ ಗಳನ್ನು ವಿತರಿಸಲಾಗುತ್ತಿತ್ತು. ಬಾಟಲ್ ಭಾರವಾಗಿರುವುದರಿಂದ ಮೇಲಿನಿಂದ ಎಸೆದಾಗ ಜನರಿಗೆ ಗಾಯಗಳಾಗುವ ಸಾಧ್ಯತೆಗಳು ಕಂಡುಬಂದಿವೆ. ಬಾಟಲ್ ಗಳ ಬದಲು ಪ್ಯಾಕೆಟ್ ಗಳಲ್ಲಿ ನೀರು ಪೂರೈಸಲಾಗುತ್ತಿದೆ ಎಂದಿದ್ದಾರೆ.
ಪ್ರವಾಹದಲ್ಲಿ ಸಿಲುಕಿರುವ ಜನರಿಗೆ ತುರ್ತಾಗಿ ಕುಡಿಯುವ ನೀರು ಪೂರೈಸುವ ಅಗತ್ಯವಿದೆ. ಆದ್ದರಿಂದ ಈಗಾಗಲೇ ಲಭ್ಯವಿರುವ ನಂದಿನಿ ಹಾಲಿನ ಖಾಲಿ ಪ್ಯಾಕೆಟ್ ಗಳಲ್ಲಿ ಶುದ್ಧ ನೀರನ್ನು ತುಂಬಿಸಿ ಹೆಲಿಕಾಪ್ಟರ್ ಮೂಲಕ ನೀಡಲಾಗುತ್ತಿದೆ.
ನಂದಿನಿ ಹಾಲಿನ ಪ್ಯಾಕೆಟ್ ಗಳಲ್ಲಿ ನೀರು ತುಂಬಿಸಿಕೊಡುತ್ತಿರುವ ಬಗ್ಗೆ ತಪ್ಪು ಮಾಹಿತಿ ಹೋಗದಿರಲಿ ಎಂಬ ಕಾರಣಕ್ಕೆ ಈ ವಿಷಯ ಸ್ಪಷ್ಟಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದ್ದಾರೆ.