Publish Date: Sat, 07 Sep 2019 (11:02 IST)
Updated Date: Sat, 07 Sep 2019 (11:06 IST)
ಬೆಂಗಳೂರು : ಲಕ್ಷ್ಮಣ್ ಸವದಿ ನೀಲಿ ಚಿತ್ರ ನೋಡಿದ್ದು ದೇಶದ್ರೋಹವಲ್ಲ ಎಂದ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆಗೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಿರುಗೇಟು ನೀಡಿದ್ದಾರೆ.
ನಿನ್ನೆ ಸಚಿವ ಜೆ.ಸಿ.ಮಾಧುಸ್ವಾಮಿ, ವಿಧಾನಸೌಧದಲ್ಲಿ ಲಕ್ಷ್ಮಣ್ ಸವದಿ ಬ್ಲೂ ಫಿಲಂ ನೋಡಿದ್ದು ದೇಶದ್ರೋಹವಲ್ಲ. ಅದು ತಪ್ಪೇ. ಆದರೆ ಅಂಥಾ ದೊಡ್ಡ ತಪ್ಪೇನಲ್ಲ. ಏನೋ ಆಕಸ್ಮಿಕವಾಗಿ ವಿಡಿಯೋ ನೋಡಿದ್ದಾರೆ ಅಷ್ಟೇ ಎಂದು ಲಕ್ಷ್ಮಣ್ ಸವದಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ಇದೀಗ ಈ ಬಗ್ಗೆ ಮಾತನಾಡಿದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮಾಧುಸ್ವಾಮಿ ಪ್ರಕಾರ ನೀಲಿ ಚಿತ್ರ ನೋಡುವುದು ಅಪರಾಧವಲ್ಲವಂತೆ. ಹಾಗಿದ್ದರೆ ವಿಧಾನಸೌಧದ ಕಾರಿಡಾರ್ ನಲ್ಲಿ ನೀಲಿ ಚಿತ್ರವನ್ನು ಯಾವಾಗ ತೋರಿಸ್ತೀರಿ ಹೇಳಿ ಎಂದು ವ್ಯಂಗ್ಯಮಾಡಿದ್ದಾರೆ. ಅಲ್ಲದೇ, ‘ಸದನದಲ್ಲಿ ನೀಲಿ ಚಿತ್ರ ನೋಡಿದ್ದಕ್ಕೆ ಈ ಹಿಂದೆ ಸಚಿವರಾಗಿದ್ದ ಸವದಿ, ಸಿ.ಸಿ.ಪಾಟೀಲ್, ಪಾಲೇಮಾರ್ ಅವರಿಂದ ರಾಜೀನಾಮೆ ಪಡೆಯಲಾಗಿತ್ತು. ಬ್ಲೂ ಫಿಲಂ ನೋಡುವುದು ಅಪರಾಧವೆಲ್ಲವೆಂದಾದರೆ ಆಗ ಅವರಿಂದ ರಾಜೀನಾಮೆ ಪಡೆದಿದ್ದಾರೂ ಏಕೆ? ಎಂದು ಪ್ರಶ್ನಿಸಿದ್ದಾರೆ.