Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರಿನಲ್ಲಿ ನಕಲಿ ಪ್ರಕ್ರಿಯೆ ಮೂಲಕ ಆಧಾರ್ ಕಾರ್ಡ್ ಮಾಡಿಕೊಡಲಾಗ್ತಾ ಇದ್ದು, ಈ ಸಂಬಂಧ ಬೊಮ್ಮನಹಳ್ಳಿ ಠಾಣೆ ಪೊಲೀಸರು 6 ಜನರನ್ನು ಬಂಧಿಸಿದ್ದಾರೆ. ಪ್ರವೀಣ್, ರಮೇಶ್, ನಾಗರಾಜ್, ಸುನಿಲ್, ರೂಪಂ ಭಟ್ಟಾಚಾರ್ಯ, ರವಿ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ನಕಲಿ ವಿಳಾಸ, ಹೆಸರು, ಫೋಟೋ ನೀಡಿ ಆಧಾರ್ ಕಾರ್ಡ್ ಕೊಡಿಸುತ್ತಿದ್ರು.
6 ಜನರ ಪೈಕಿ ಒಬ್ಬೊಬ್ಬರು ಒಂದು ಜವಾಬ್ದಾರಿ ನಿರ್ವಹಿಸುತ್ತಿದ್ದದ್ದು ಬೆಳಕಿಗೆ ಬಂದಿದೆ. ವ್ಯವಸ್ಥಿತ ಜಾಲವನ್ನು ಬೊಮ್ಮನಹಳ್ಳಿ ಪೊಲೀಸರ ತಂಡ ಬಯಲಿಗೆಳೆದಿದೆ. ಬಂಧಿತ ಆರೋಪಿ ಪ್ರವೀಣ್ ಎಂಬಾತ ಮೊಬೈಲ್ ಸೆಂಟರ್ ನಡೆಸುತ್ತಿದ್ದು, ಆಧಾರ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಟ್ಟುಕೊಳ್ಳುತ್ತಿದ್ದ. ಆಧಾರ್ಗೆ ಬೇಕಿರುವವರ ಮಾಹಿತಿ ಪಡೆದು ಆನ್ಲೈನ್ ಅಪ್ಲಿಕೇಶನ್ ಸಲ್ಲಿಸುತ್ತಿದ್ದ. ಮತ್ತೊಬ್ಬ ಆರೋಪಿ ರಮೇಶ್ ಆಟೋ ಚಾಲಕನಾಗಿದ್ದು, ಪ್ರವೀಣ್ ಕಳಿಸುತ್ತಿದ್ದ ಅರ್ಜಿದಾರನನ್ನ ಗೆಜೆಟೆಡ್ ಆಫೀಸರ್ ಬಳಿ ಕರೆದೊಯ್ಯುತ್ತಿದ್ದ. ಆರೋಪಿ ನಾಗರಾಜ್ ಎಂಬಾತ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಅಧಿಕೃತವಾಗಿ ಆಧಾರ್ ಪಡೆಯಲು ಬೇಕಿರುವ ಈ ಸ್ಕ್ಯಾನರ್ ದುರ್ಬಳಕೆ ಮಾಡಿಕೊಳ್ತಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ.