Publish Date: Wed, 20 Feb 2019 (17:15 IST)
Updated Date: Wed, 20 Feb 2019 (17:17 IST)
ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಹೊಸಪೇಟೆಯ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ನಡೆಸಿದ ಮಾರಣಾಂತಿಕ ಹಲ್ಲೆ ಪ್ರಕರಣ ಕೈ ನಾಯಕರಿಗೆ ಬಾರಿ ತಲೆಬಿಸಿಯಾಗಿತ್ತು. ಕೊನೆಗೂ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರನ್ನು ಬಿಡದಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊರ ರಾಜ್ಯದಲ್ಲಿ ಜೆ.ಎನ್.ಗಣೇಶ್ ಅವರನ್ನು ಬಂಧಿಸಲಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದ್ದು, ಇಂದು ಮಧ್ಯರಾತ್ರಿ ಗಣೇಶ್ ಅವರನ್ನು ರಾಮನಗರಕ್ಕೆ ಕರೆತರುವ ಸಾಧ್ಯತೆ ಇದೆ. ಗಣೇಶ್ ಅವರನ್ನು ಗೋವಾದಲ್ಲಿ ಬಂಧಿಸಲಾಗಿದೆ ಎನ್ನಲಾಗಿದೆ.
ಜನವರಿ 20ರ ರಾತ್ರಿ ಜೆ.ಎನ್.ಗಣೇಶ್ ಅವರು ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಮೇಲೆ ಈಗಲ್ಟನ್ ರೆಸಾರ್ಟ್ನಲ್ಲಿ ಹಲ್ಲೆ ಮಾಡಿದ್ದರು. ಆನಂದ್ ಸಿಂಗ್ ಅವರ ಕಣ್ಣು, ತಲೆಗೆ ಗಂಭೀರ ಗಾಯಗಳಾಗಿತ್ತು. ಅಂದಿನಿಂದ ಕಂಪ್ಲಿ ಗಣೇಶ್ ತಲೆಮರೆಸಿಕೊಂಡಿದ್ದರು. ಜನವರಿ 21ರಂದು ಗಣೇಶ್ ಮೇಲೆ ಎಫ್ಐಆರ್ ದಾಖಲಾಗಿತ್ತು. ಅಂದಿನಿಂದಲೂ ಗಣೇಶ್ ತಲೆಮರೆಸಿಕೊಂಡಿದ್ದರು.
ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಗಣೇಶ್ ಅವರು ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಆದರೆ ನಿನ್ನೆ ಅದನ್ನು ವಾಪಸ್ ಪಡೆಯಲಾಗಿತ್ತು. ಅದರ ಬೆನ್ನಿಗೆ ಇಂದು ಗಣೇಶ್ ಬಂಧನವಾಗಿದೆ.