Publish Date: Fri, 11 Aug 2023 (20:00 IST)
Updated Date: Fri, 11 Aug 2023 (20:39 IST)
ಕೋವಿಡ್ ಕಾಲದ ಹಾಗೂ ಮೇಕೆದಾಟು ಪಾದಯಾತ್ರೆ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನ ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ. ಇದರ ಜೊತೆಗೆ ಇನ್ನೂ 16 ವಿಚಾರಗಳಿಗೆ ಇಂದಿನ ಸಂಪುಟಸಭೆ ಅಸ್ತು ಎಂದಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಒಟ್ಟು ಹದಿನೇಳು ವಿಷಯಗಳ ಬಗ್ಗೆ ಚರ್ಚೆ ನಡೆಸಿ 16 ವಿಷಯಗಳಿಗೆ ಒಪ್ಪಿಗೆ ನೀಡಿದೆ. ಅದ್ರಲ್ಲಿ ಪ್ರಮುಖವಾಗಿದ್ದು ಕಾಂಗ್ರೆಸ್ ನಾಯಕರ ಮೇಲೆ ಕೋವಿಡ್ ಅವಧಿ ಹಾಗೂ ಮೇಕೆದಾಟು ಪಾದಯಾತ್ರೆ ಕಾಲದಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆದದ್ದು.
ಹಿಂದಿನ ಸರ್ಕಾರದ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನ ಹಲವು ನಾಯಕರ ವಿರುದ್ದ9 ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲ ಪ್ರಕರಣಗಳನ್ನು ಹಿಂಪಡೆಯಲು ಇಂದಿನ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದನ್ನ ಹೊರತುಪಡಿಸಿದಂತೆ ವಿವಿಧ ಪ್ರಕರಣಗಳ ಹಿನ್ನೆಲೆಯಲ್ಲಿ ಶಿಕ್ಷೆಗೆ ಗುರಿಯಾದ ಮೂವರು ಅಧಿಕಾರಿಗಳನ್ನು ವಜಾಗೊಳಿಸಲು ಸಂಪುಟ ಒಪ್ಪಿಗೆ ನೋಡಿದೆ. ಈ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಎಂ ಎಚ್ ನಾಗೇಶ್, ರಾಮನಗರ ಜಿಲ್ಲಾಸ್ಪತ್ರೆಯ ಹಿರಿಯ ಸ್ತ್ರೀರೋಗ ತಜ್ಞೆ ಉಷಾ ಕದರಮಂಡಲಗಿ ಹಾಗೂ ಮತ್ತೋರ್ವ ಸ್ತ್ರೀರೋಗ ತಜ್ಞೆ ಎಸ್ ಡಿ ನಾಗಮಣಿಯವರುಗಳನ್ನು ಕಡ್ಡಾಯ ನಿವೃತ್ತಿಗೊಳಿಸಲು ಸಂಪುಟ ನಿರ್ದೇಶಿಸಿದೆ
ಉಳಿದಂತೆ ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ “ಏರೋಸ್ಪೇಸ್ ಹಾಗೂ ರಕ್ಷಣಾ ಉತ್ಕೃಷ್ಟತಾ ಕೇಂದ್ರ"ದ ಸ್ಥಾಪನೆಯ ಪರಿಷ್ಕೃತ ಅಂದಾಜು ರೂ. 391.61 ಕೋಟಿಗಳಿಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಹಾಗೆಯೇ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ, 325 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ ರೂ. 187.90 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಒಪ್ಪಿಕೊಂಡಿದೆ. ಇದರ ಜೊತೆಗೆ ಕರಾವಳಿ ಅಭಿವೃದ್ಧಿ ಮಂಡಳಿ ಹೆಸರು ಬದಲು ಮಾಡಿ ಕರಾವಳಿ ಪ್ರದೇಶಾಭಿವೃದ್ದಿ ಮಂಡಳಿ ರಚನೆ ಮಾಡಿದ್ದು ಇದರ ವ್ಯಾಪ್ತಿಗೆ ಮಂಗಳೂರು , ಚಿಕ್ಕಮಗಳೂರು, ಕರಾವಳಿ ಜಿಲ್ಲೆಗಳನ್ನು ಸೇರಿಸಲಾಗಿದೆ.
ಮುಂದುವರೆದಂತೆ ಕರ್ನಾಟಕ ವಾಹನಗಳಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ವೆಹಿಕಲ್ಸ್ ಟ್ರ್ಯಾಕಿಂಗ್ ವ್ಯವಸ್ಥೆ ಹಾಗೂ ಪ್ಯಾನಿಕ್ ಬಟನ್' ವ್ಯವಸ್ಥೆಯನ್ನು (ಕೇಂದ್ರೀಕೃತ ಕಂಟ್ರೋಲ್ ರೂಂ ಸಹಿತವಾಗಿ 30.74 ಕೋಟಿಗಳ ಅಂದಾಜು ವೆಚ್ಚದಲ್ಲಿ ಅಳವಡಿಸುವ ಯೋಜನೆಗೆ ರಾಜ್ಯ ಸಚಿವ ಸಂಪುಟ (VTMS) ಆಡಳಿತಾತ್ಮಕ ಒಪ್ಪಿಗೆ ನೀಡಿದೆ. ಇದರೊಂದಿಗೆ ನೂತನ ಸೈಬರ್ ಭದ್ರತಾ ನಿಯಮಾವಳಿ ರಚನೆ, ಬಿಬಿಎಂಪಿ ಮಾದರಿಯಲ್ಲೇ ರಾಜ್ಯದ ಇತರ ನಗರಾಭಿವೃದ್ಧಿ ಹಾಗೂ ಪಟ್ಟಣಪಂಚಾಯ್ತಿಗಳಲ್ಲೂ ಕಟ್ಟಡ,ಆಸ್ತಿ ತೆರಿಗೆ ಪಡೆಯುವ ನಿಯಮ ಜಾರಿ ಮಾಡಲೂ ಸಂಪುಟ ಅಸ್ತು ಎಂದಿದೆ.