Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಕೇಂದ್ರ ಸರಕಾರದ ಸರ್ವೆ ಇಲಾಖೆಯಲ್ಲಿ ಉನ್ನತ ಅಧಿಕಾರಿ ಎಂದು ನಂಬಿಸಿ ಸರಕಾರಿ ಕೆಲಸ ಕೊಡಿಸುವುದಾಗಿ 15ಕ್ಕೂ ಹೆಚ್ಚು ಜನರಿಂದ 1.3 ಕೋಟಿ ರೂ. ಪಡೆದು ವಂಚಿಸಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಬಸ್ರೂರು ಮೂಲದ ಜೆಪಿ ನಗರದ ನಿವಾಸಿ ರಾಘವ ಅಲಿಯಾಸ್ ರಾಘವೇಂದ್ರ (39) ಬಂಧಿತ. ಆರೋಪಿಯಿಂದ 1 ದ್ವಿಚಕ್ರ ವಾಹನ, ಮೊಬೈಲ್, ಟ್ಯಾಬ್ಸ್, ಲ್ಯಾಪ್ಟಾಪ್ಗಳು, ಚೆಕ್ಗಳು, ಬಾಂಡ್ ಪೇಪರ್ಗಳು, ಆತ ಖರೀದಿಸಿದ್ದ ಆಸ್ತಿಯ ದಾಖಲಾತಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಆರೋಪಿಯ ಬಂಧನದಿಂದ ಆತನ ವಿರುದ್ಧ ಈಗಾಗಲೇ ಜೆ.ಪಿ.ನಗರ, ಯಶವಂತಪುರ, ಬನವಾಸಿ ಪೊಲೀಸ್ ಠಾಣೆ ಹಾಗೂ ಇನ್ನಿತರ ಜಿಲ್ಲೆಗಳಲ್ಲಿಯೂ ಸಹ ದಾಖಲಾಗಿರುವ ಪ್ರಕರಣ ಬೆಳಕಿಗೆ ಬಂದಿವೆ.
ಆರೋಪಿ ರಾಘವೇಂದ್ರ ಕಳೆದ ಐದಾರು ವರ್ಷಗಳಿಂದ ಬೆಂಗಳೂರಿನಲ್ಲಿದ್ದು, ಸರ್ವೆ ಇಲಾಖೆಯ ಡೆಪ್ಯುಟಿ ಕಮಿಷನರ್ ಎಂದು ನಕಲಿ ಗುರುತಿನ ಚೀಟಿ ಮಾಡಿಕೊಂಡು ತನ್ನ ಕಾರಿಗೆ ಭಾರತ ಸರಕಾರದ ಬೋರ್ಡ್ ಅಳವಡಿಸಿಕೊಂಡಿದ್ದ.
ಸರ್ವೆ ಇಲಾಖೆ ಮತ್ತು ಇನ್ನಿತರೆ ಸರಕಾರಿ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ಒಬ್ಬೊಬ್ಬರಿಂದ ತಲಾ 8-10 ಲಕ್ಷ ರೂ. ಪಡೆದು, ಕೆಲಸವನ್ನೂ ಕೊಡದೇ ಹಣವನ್ನೂ ಹಿಂತಿರುಗಿಸದೇ ವಂಚಿಸುತ್ತಿದ್ದ. ಆರೋಪಿಯಿಂದ ವಂಚನೆಗೊಳಗಾದ ವ್ಯಕ್ತಿಯೊಬ್ಬರು ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.