Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಹಿಳಾ ಪಿಜಿ ಕಟ್ಟಡ ದಿಂದ ಜಿಗಿದು ಬಿಕಾಂ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿ ರುವ ಘಟನೆ ಜೆಬಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಮುಳಬಾಗಿಲಿನ ಭವ್ಯ(19) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ. ಈಕೆ ಜ್ಯೋತಿನಿವಾಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದರು.
ಮುರುಗೇಶ್ಪಾಳ್ಯದಲ್ಲಿ ಭವ್ಯ ಪೋಷಕರೊಂದಿಗೆ ನೆಲೆಸಿದ್ದರು. ನಿನ್ನೆ ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ಭವ್ಯ ಹೊರಟ್ಟಿದ್ದಾರೆ. ಆದರೆ ಕಾಲೇಜಿಗೆ ಹೋಗದೆ ಅಮರಜ್ಯೋತಿ ಲೇಔಟ್ನಲ್ಲಿರುವ ಮಹಿಳಾ ಪಿಜಿಗೆ ಹೋಗಿ ಅಲ್ಲಿನ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುದ್ದಿ ತಿಳಿದು ಜೆಬಿನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಭವ್ಯ ತನ್ನ ಸಹೋದರಿಯ ಮೊಬೈಲ್ಗೆ ಕರೆ ಮಾಡಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಈ ವಿಷಯವನ್ನು ಸಹೋದರಿ ಪೋಷಕರಿಗೆ ತಿಳಿಸಿದಾಗ ಭವ್ಯ ತಂದೆ ತಕ್ಷಣ ಕರೆ ಮಾಡಿದರಾದರೂ ಅಷ್ಟೊತ್ತಿಗಾಗಲೇ ಭವ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪರೀಕ್ಷೆ ಸರಿಯಾಗಿ ಬರೆದಿಲ್ಲವೆಂದು ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.