Publish Date: Sun, 07 Nov 2021 (09:32 IST)
Updated Date: Sun, 07 Nov 2021 (09:36 IST)
ಬೆಂಗಳೂರು : R.R.ನಗರದಲ್ಲಿ ವಿದ್ಯಾರ್ಥಿಯೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ತರುಣ್ ಎಂಬ ವಿದ್ಯಾರ್ಥಿಯನ್ನು ಅಪಹರಿಸಿ ನಂತರ ಕೊಲೆ ಮಾಡಲಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ನಾಸಿರ್, ಸೈಯದ್ ತಜ್ಮುಲ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈರ್ವರು ಆರೋಪಿಗಳೂ ಕೂಡ ತರುಣ್ ತಂದೆ ಬಳಿಯೇ ಕೆಲಸ ಮಾಡುತ್ತಿದ್ದರು. ಹಣದಾಸೆಗಾಗಿ ತರುಣ್ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜರಾಜೇಶ್ವರಿ ಠಾಣೆ ಪೊಲೀಸರಿಂದ ವಿಚಾರಣೆ ಮುಂದುವರೆದಿದೆ.
ಪ್ರಕರಣವೇನು?
ತರುಣ್ ಭಾರತಿನಗರದ ಮನೆಯಿಂದ ಪಟಾಕಿ ತರುವುದಾಗಿ ಹೇಳಿ ಹೋಗಿದ್ದರು. ಆದರೆ ಎರಡು ದಿನದ ನಂತರ ರಾಜರಾಜೇಶ್ವರಿ ನಗರ ರಾಜಕಾಲುವೆ ಬಳಿ ಚೀಲದಲ್ಲಿ ಹೆಣವಾಗಿ ಪತ್ತೆಯಾಗಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ತರುಣ್ ತಂದೆಯ ಬಳಿ ಕೆಲಸ ಮಾಡುತ್ತಿದ್ದ ವ್ಯಕ್ತಿಗಳೇ ಆರೋಪಿಗಳು ಎಂದು ಸುಳಿವು ದೊರೆತ ನಂತರ ಬಂಧಿಸಿದ್ದಾರೆ. ತರುಣ್ ಮನೆಯಿಂದ ಹೋಗುವಾಗ ಆರೋಪಿಗಳನ್ನು ಬರುತ್ತೀರಾ ಎಂದು ಕರೆದು, ಕರೆದೊಯ್ದಿದ್ದ. ಡ್ರಗ್ಸ್ ನಶೆಯಲ್ಲಿದ್ದ ಆರೋಪಿಗಳು ಹಣದಾಸೆಗೆ ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ಕಿರುಚಾಡದಂತೆ ಬಾಯಿಗೆ ಟೇಪ್ ಸುತ್ತಿದ್ದಾರೆ. ಮನೆಗೆ ಕರೆ ಮಾಡಿ ₹ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಯಾವಾಗ ವಿಚಾರ ಬಹಿರಂಗವಾಯಿತೋ ಆಗ ತರುಣ್ನನ್ನು ಆರೋಪಿಗಳು ಕೊಲೆ ಮಾಡಿದ್ದಾರೆ. ನಂತರ ಪ್ಲಾಸ್ಟಿಕ್ ಚೀಲಕ್ಕೆ ಸುತ್ತಿ, ರಾಜಕಾಲುವೆ ಬಳಿ ಬಿಸಾಕಿ ಪರಾರಿಯಾಗಿದ್ದರು. ನಗರದ ಬೇರೆ ಬೇರೆ ಭಾಗಗಳಲ್ಲಿ ತಲೆಮರೆಸಿಕೊಂಡಿದ್ದರು.