Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕದ್ದ ಬೈಕ್ ಗಳನ್ನೇ ಸಂಬಂಧಿಕರಿಗೆ ಗಿಫ್ಟ್ ಆಗಿ ಕೊಡುತ್ತಿದ್ದ ಖತರ್ನಾಕ್ ಖದೀಮನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಭರತ್ ಬಂಧಿತ ಆರೋಪಿ ಆಗಿದ್ದು, ರಾಜಾಜಿನಗರದ ನಿವಾಸಿ ಎಂದು ಹೇಳಲಾಗಿದೆ. ನಗರದ ವಿವಿಧೆಡೆ ಓಡಾಡಿ ಮನೆ ಮುಂದೆ ನಿಂತಿರುವ ವಾಹನಗಳನ್ನು ಗುರುತಿಸುತ್ತಿದ್ದ.
ವಾಹನಗಳ ನಂಬರ್ ಅನ್ನು ತನ್ನ ಮೊಬೈಲ್ನಲ್ಲಿ ನೋಂದಾಯಿಸಿಕೊಂಡು ಬೆಂಗಳೂರು ಟ್ರಾಫಿಕ್ ಪೊಲೀಸ್ ಆಯಪ್ ಮೂಲಕ ವಾಹನದ ವಿರುದ್ಧ ಸಂಚಾರಿ ನಿಯಮ ಉಲ್ಲಂಘನೆ ದಂಡ ಬಾಕಿ ಇದೆಯೇ ಎಂದು ಪರಿಶೀಲಿಸುತ್ತಿದ್ದ. ಒಂದು ವೇಳೆ ದಂಡ ವಿಧಿಸಿದ್ದರೆ ಅಂತಹ ವಾಹನಗಳನ್ನು ಕಳವು ಮಾಡುತ್ತಿರಲಿಲ್ಲ. ಯಾವುದೇ ಪ್ರಕರಣಗಳಿಲ್ಲದ ವಾಹನಗಳನ್ನು ಕದಿಯುತ್ತಿದ್ದ. ಕದ್ದ ನಂತರ ಬೈಕ್ ಮಾರಿದರೆ ಕಳ್ಳತನ ಮಾಡಿರುವುದು ತಿಳಿಯಬಹುದು ಎಂದು, ಸಂಬಂಧಿಕರಿಗೆ ಉಚಿತವಾಗಿ ನೀಡುತ್ತಿದ್ದ ಎಂಬುದು ವಿಚಾರಣೆಯಲ್ಲಿ ಗೊತ್ತಾಗಿದೆ.ಈ ಹಿನ್ನೆಲೆ ಆರೋಪಿಯನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ