Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಅಲ್ಪ ಸಂಖ್ಯಾತರ ಶಿಕ್ಷಣ ಸಂಸ್ಥೆಗಳ ನಿಯಮಗಳಿಗೆ ಬದಲಾವಣೆ ತರುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಇದಕ್ಕೆ ಪ್ರತಿಪಕ್ಷ ಬಿಜೆಪಿ ಟೀಕಿಸಿದೆ.
ಅಲ್ಪ ಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ ಇಂತಿಷ್ಟೇ ಆ ವರ್ಗದ ವಿದ್ಯಾರ್ಥಿಗಳು ಇರಬೇಕೆಂಬ ನಿಯಮ ತೆಗೆದುಹಾಕಲಾಗಿದೆ. ಇದುವರೆಗೆ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ನಿಗದಿಪಡಿಸಿದ ಶೇಕಡಾವಾರು ವಿದ್ಯಾರ್ಥಿಗಳು ಲಭ್ಯವಿರುತ್ತಿರಲಿಲ್ಲ. ಇದರಿಂದಾಗಿ ಆ ಶಿಕ್ಷಣ ಸಂಸ್ಥೆಗಳ ಮಾನ್ಯತೆ ಕಷ್ಟವಾಗುತ್ತಿತ್ತು. ಆದರೆ ಇನ್ನು ಮುಂದೆ ಆ ನಿಬಂಧನೆ ಇಲ್ಲದೇ ಇರುವುದರಿಂದ ಮಾನ್ಯತೆ ಪಡೆಯಲು ಕಷ್ಟವಾಗಲ್ಲ.
ಇನ್ನು ಮುಂದೆ ಅಲ್ಪ ಸಂಖ್ಯಾತ ಪ್ರಾಥಮಿ ಮತ್ತು ಪ್ರೌಢಶಿಕ್ಷಣ ಶಾಲೆಗಳ ಆಡಳಿತ ಮಂಡಳಿಯಲ್ಲಿ ಮೂರನೇ ಎರಡರಷ್ಟು ಭಾಗ ಅಲ್ಪ ಸಂಖ್ಯಾತರೇ ಇರಬೇಕು ಎಂಬ ನಿಯಮವನ್ನು ಅಲ್ಪಸಂಖ್ಯಾತ ಕಾಲೇಜುಗಳಿಗೂ ವಿಸ್ತರಿಸಲಾಗುತ್ತದೆ ಎಂದು ಸಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ. ಈ ಹಿಂದೆ ಹಲವು ಬಾರಿ ಪರಿಷ್ಕರಣೆಗೆ ಮುಂದಾಗಿದ್ದರೂ ಅನುಮೋದನೆ ದೊರಕಲಿಲ್ಲ. ಕಳೆದ ಬಾರಿ ಉಪಚುನಾವಣೆ ಹೊಸ್ತಿಲಲ್ಲಿ ವಕ್ಫ್ ವಿವಾದ, ಮುಸ್ಲಿಂ ಮೀಸಲಾತಿ ವಿಚಾರಗಳು ವಿವಾದದಲ್ಲಿದ್ದರಿಂದ ಸರ್ಕಾರಕ್ಕೆ ತಿರುಗುಬಾಣವಾಗಬಹುದೆಂಬ ಕಾರಣಕ್ಕೆ ಈ ವಿಚಾವರನ್ನು ಮುಂದೂಡಲಾಗಿತ್ತು.
ಆದರೆ ಸರ್ಕಾರದ ನಿರ್ಧಾರವನ್ನು ಟೀಕಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದು ಕರ್ನಾಟಕವನ್ನು ಪಾಕಿಸ್ತಾನ ಮಾಡಲು ಹೊರಟ ಕಾಂಗ್ರೆಸ್ ಸರ್ಕಾರದ ಹುನ್ನಾರ. ಈ ಸರ್ಕಾರ ಮುಸ್ಲಿಮರಿಗೆ ಇನ್ನಿಲ್ಲದ ಆದ್ಯತೆ ಕೊಡುತ್ತಿದೆ. ಅವರು ಏನು ಕೊಡುತ್ತಾರೋ ಕೊಡಲಿ, ನಮ್ಮ ಸರ್ಕಾರ ಬಂದಾಗ ಇದನ್ನೆಲ್ಲಾ ಹಿಂಪಡೆಯುತ್ತೇವೆ ಎಂದಿದ್ದಾರೆ.