Publish Date: Tue, 19 Nov 2019 (10:35 IST)
Updated Date: Tue, 19 Nov 2019 (14:46 IST)
ಮೈಸೂರು : ಮೈಸೂರಿನಲ್ಲಿ ಬಿಜೆಪಿ ನಾಯಕ ಯೋಗೇಶ್ವರ್ ಹೆಸರಿನಲ್ಲಿ 30 ಸಾವಿರ ಸೀರೆ ಸಿಕ್ಕಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಹಣದ ಮೂಲಕ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ 30 ಸೀರೆಗಳು ಸಿಕ್ಕಿವೆ. ಅದು ಯಾರದ್ದು? ಕಾನೂನಿನಲ್ಲಿ ಸೀರೆಗಳನ್ನು ಹಂಚುವುದಕ್ಕೆ ಅವಕಾಶವಿದ್ಯಾ? ಸರ್ಕಾರದಲ್ಲಿ ಇದ್ದುಕೊಂಡು ಅವರು ಅಕ್ರಮ ಮಾಡುತ್ತಾರೆ. ಅವರಿಗೆ ಯಾವ ನೈತಿಕತೆ ಇದೆ. ಸಿಎಂ ಆಗಿ ಮುಂದುವರಿಯಲು ಬಿಎಸ್ ವೈ ಗೆ ಯಾವ ನೈತಿಕತೆ ಇದೆ. ಅವರು ಚುನಾವಣಾ ಕಣದಲ್ಲಿ ಇರುವುದಕ್ಕೆ ಅರ್ಹರಾ? ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾಗೇ ಶ್ರೀರಾಮುಲು ನನ್ನ ವಿರುದ್ಧ ಸೋತು ಹತಾಶರಾಗಿದ್ದಾರೆ. ಮಾನ ಮರ್ಯಾದೆ ಇದ್ದಿದ್ದರೆ ರಾಜೀನಾಮೆ ನೀಡಬೇಕಿತ್ತು. ಡಿಸಿಎಂ ಮಾಡ್ತಾರೆಂದು ಪ್ರಚಾರ ಮಾಡಿಕೊಂಡಿದ್ದರು. ಆದರೆ ಶಾಸಕರಲ್ಲದವರಿಗೆ ಡಿಸಿಎಂ ಸ್ಥಾನ ನೀಡಿದ್ದಾರೆ. ಎಸ್ ಟಿಗೆ ಶೇ.7ರಷ್ಟು ಮೀಸಲಾತಿ ನೀಡದಿದ್ರೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಆದ್ರೆ ಈಗ ಏನಾಗಿದೆ ಎಂದು ಶ್ರೀರಾಮುಲು ವಿರುದ್ಧ ಕಿಡಿಕಾರಿದ್ದಾರೆ.