Publish Date: Wed, 24 Oct 2018 (09:59 IST)
Updated Date: Wed, 24 Oct 2018 (10:01 IST)
ಬೆಂಗಳೂರು: ಬಳ್ಳಾರಿ ಲೋಕಸಭೆ ಉಪಚುನಾವಣೆಯ ಕಣ ರಂಗೇರುತ್ತಿದ್ದು, ಬಿಜೆಪಿಯ ಬಿ ಶ್ರೀರಾಮುಲು ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನಡುವೆ ಮತ್ತೆ ಮಾತಿನ ಚಕಮಕಿ ಜೋರಾಗಿದೆ.
ಮೊನ್ನೆಯಷ್ಟೇ ಶ್ರೀರಾಮುಲುಗೆ 420, ಸೆಕ್ಷನ್ 326, 307 ಮುಂತಾದವು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದಿದ್ದ ಸಿದ್ದರಾಮಯ್ಯ ಮತ್ತೆ ಸರಣಿ ಟ್ವೀಟ್ ಗಳ ಮೂಲಕ ಟೀಕಾ ಪ್ರಹಾರ ಮುಂದುವರಿಸಿದ್ದಾರೆ.
ತಾನು ಲೋಕಸಭೆಯಲ್ಲಿ ಅತೀ ಹೆಚ್ಚು ಬಾರಿ ಮಾತನಾಡಿದ್ದೇನೆ ಎಂಬ ರಾಮುಲು ಹೇಳಿಕೆಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ರಾಮುಲು ಒಂದು ದಿನವಾದರೂ ಮಾತನಾಡಿದ್ದಾರೆಯೇ? ಎಷ್ಟು ಬಾರಿ ಮಾತನಾಡಿದ್ದೇನೆ ಎನ್ನುವುದು ಮುಖ್ಯವಲ್ಲ. ಅದರಿಂದ ಏನು ಉಪಯೋಗವಾಗಿದೆ ಎಂದು ಮುಖ್ಯ ಎಂದಿದ್ದಾರೆ.
ನಾವು ಅಧಿಕಾರದಲ್ಲಿದ್ದಾಗ ಅನ್ನ ಭಾಗ್ಯ ಯೋಜನೆ ಜಾರಿಗೆ ತಂದಿದ್ದೇವೆ. ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೇವೆಂದು ರಾಮುಲು ಹೇಳಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಸಲು ಪ್ರಧಾನಿ ಮೋದಿಯವರ ಕೈ ಬಲ ಪಡಿಸಬೇಕೇ? ಎಂದು ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ.
ಇದಕ್ಕೆ ತಕ್ಕ ತಿರುಗೇಟು ನೀಡಿರುವ ರಾಮುಲು ಹಲವು ಹಿಂದೂ ಕಾರ್ಯಕರ್ತರನ್ನು ಹತ್ಯೆಗೆ ಕಾರಣವಾಗಿದ್ದಕ್ಕೆ ಸೆಕ್ಷನ್ 326, ದಕ್ಷ ಅಧಿಕಾರಿಗಳಿಗೆ ಕಿರುಕುಳ ನೀಡಿದ್ದಕ್ಕೆ ಸೆಕ್ಷನ್ 307, ಜೆಡಿಎಸ್ ನ್ನು ವಿರೋಧಿಸಿ ಈಗ ಅಧಿಕಾರಕ್ಕಾಗಿ ಅವರ ಜತೆಗೇ ಕೈ ಜೋಡಿಸಿ ಜನತೆಯನ್ನು ವಂಚಿಸಿದ್ದಕ್ಕೆ 420. ಇವು ನಿಮ್ಮ ವಿರುದ್ಧ ದಾಖಲಾಗಬೇಕಿತ್ತಲ್ಲವೇ? ಎಂದು ರಾಮುಲು ಟ್ವೀಟ್ ಮೂಲಕ ಕೆಣಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.