Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಉಪ ಚುನಾವಣೆ ಹಿನ್ನೆಲೆಯಲ್ಲಿ ಹಾನಗಲ್ ಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ಮತಬೇಟೆಗೆ ಇಳಿದಿದ್ದಾರೆ.
ಬಮ್ಮನಹಳ್ಳಿ ಗ್ರಾಮದಲ್ಲಿ ಪ್ರಚಾರದಲ್ಲಿ ಮಾತನಾಡಿದ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅನ್ನಭಾಗ್ಯ, ಅನ್ನಭಾಗ್ಯ ಅಂತಾರೆ. ಸ್ವಾತಂತ್ರ್ಯ ಬಂದ್ಮೇಲೆ ಪಡಿತರದಲ್ಲಿ ಅಕ್ಕಿನೇ ಕೊಡ್ತಿರಲಿಲ್ಲವೇನೋ ಅನ್ನೋ ರೀತಿಯಲ್ಲಿ ಹೇಳ್ತಿದ್ದಾರೆ. ಅಕ್ಕಿಗೆ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಹಣ ಕೊಡ್ತಿದೆ. 29 ರುಪಾಯಿ ಕೊಟ್ಟವರನ್ನು ಬಿಟ್ಟು 3 ರುಪಾಯಿ ಕೊಟ್ಟವರ ಫೋಟೋ ಹಾಕ್ಕೊಂಡ್ರು. 30 ಕೆಜಿ ಇದ್ದಿದ್ದು 7 ಕೆಜಿ ಆಯ್ತು, ನಂತರ 3 ಕೆಜಿ ಆಯ್ತು. ಚುನಾವಣೆ ಬಂದಾಗ ಏಳು ಕೆಜಿ ಅಂದರು. ಕೇಂದ್ರ ಸರ್ಕಾರವನ್ನ ಮರೆಮಾಚಿ ಅನ್ನಭಾಗ್ಯ ಅನ್ನಭಾಗ್ಯ ಅಂದರು. ಅವರ ಯೋಜನೆಗಳು ಜನರ ಮನೆ ಬಾಗಿಲಿಗೆ ಮುಟ್ಟಲಿಲ್ಲ. 2018ರಲ್ಲಿ ಜನರು ಅವರನ್ನ ಮನೆ ಬಾಗಿಲಿಗೆ ಬರಬೇಡಿ ಅನ್ನೋ ಫಲಿತಾಂಶ ನೀಡಿದರು ಎಂದು ವ್ಯಂಗ್ಯವಾಡಿದರು.