Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚಿತ್ರ ಮಂದಿರಗಳ ಪ್ರದರ್ಶನಕ್ಕೆ ಸರ್ಕಾರ ಹಾಕಿರುವ ಶೇ 50ರ ವೀಕ್ಷಕರ ನಿರ್ಬಂಧವನ್ನು ಕೂಡಲೇ ತೆರವು ಮಾಡಬೇಕು ಎಂದು ಚಿತ್ರ ನಟ ಡಾ.ಶಿವರಾಜ್ಕುಮಾರ್ ಆಗ್ರಹಿಸಿದರು.
ಭಾನುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಮಾರಿ ಕೊರೋನಾಗೆ ಸಿನಿಮಾ ಕ್ಷೇತ್ರ ಅಕ್ಷರಶಃ ನಲುಗಿದೆ.
ಸಿನಿಮಾ ಥಿಯೇಟರ್ ಗಳಿಗೆ ಸರ್ಕಾರ ವಿಧಿಸಿರುವ 50-50 ರೂಲ್ಸ್ ನಿಂದ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಇದರಿಂದ ಬೆಂಗಳೂರು, ಮೈಸೂರು ಸೇರಿದಂತೆ ಕರ್ನಾಟಕದ ಬಹುತೇಕ ಸಿನಿಮಾ ಮಂದಿರಗಳು ಬಾಗಿಲು ಹಾಕಿವೆ. ಎಲ್ಲಾ ಕ್ಷೇತ್ರಗಳಿಗೆ ರಿಲ್ಯಾಕ್ಸ್ ಕೊಟ್ಟು ಸಿನಿಮಾ ಥಿಯೇಟರ್ ಗಳಿಗೆ ಮಾತ್ರ ನಿರ್ಬಂಧ ವಿಧಿಸಿರುವ ಸರ್ಕಾರದ ತೀರ್ಮಾನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹೊಸ ಹೊಸ ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ. ಆದರೆ ರೆಡಿಯಾದ ಹೊಸ ಸಿನಿಮಾಗಳನ್ನು ರಿಲೀಸ್ ಮಾಡಲು ನಿರ್ಮಾಪಕರು ಹಾಗೂ ವಿತರಕರು ರಿಸ್ಕ್ ತೆಗೆದುಕೊಳ್ಳುತ್ತಿಲ್ಲ. ಕೊರೋನಾ ಹಿನ್ನೆಲೆ ಥಿಯೇಟರ್ ಗಳಿಗೆ ಶೇಕಡಾ 50-50 ಪ್ರೇಕ್ಷಕರಿಗೆ ಮಾತ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಹೆಚ್ಚು ಪ್ರೇಕ್ಷಕರಿಲ್ಲದಿದ್ದರೆ ಲಾಸ್ ಆಗುವ ಕಾರಣ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಇನ್ನು ಹೊಸ ಸಿನಿಮಾ ಬಿಡುಗಡೆ ಆಗದ ಕಾರಣ ಮೈಸೂರು, ಬೆಂಗಳೂರು, ಮಂಡ್ಯ, ಹಾಸನ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳ ಸಿನಿಮಾ ಥಿಯೇಟರ್ ಗಳು ಬಾಗಿಲು ಹಾಕಿವೆ ಎಂದು ಕಳವಳ ವ್ಯಕ್ತಪಡಿಸಿದರು.