Publish Date: Wed, 11 Jun 2025 (12:22 IST)
Updated Date: Wed, 11 Jun 2025 (12:25 IST)
ಬೆಂಗಳೂರು: ಹಳೆ ಜಾತಿ ಸಮೀಕ್ಷೆಗೆ 187 ಕೋಟಿ ಖರ್ಚು ಮಾಡಿದ್ದು ವೇಸ್ಟ್ ಆಯ್ತಲ್ಲಾ ಎಂದು ಸಚಿವ ಸತೀಶ್ ಜಾರಕಿಹೊಳಿಯನ್ನು ಕೇಳಿದಾಗ ಸ್ವಲ್ಪ ಖರ್ಚಾಗ್ತದೆ ಅದೆಲ್ಲಾ ಪರ್ವಾಗಿಲ್ಲ ಎಂದಿದ್ದಾರೆ.
10 ವರ್ಷದ ಹಿಂದೆ ನಡೆದಿದ್ದ ಜಾತಿ ಸಮೀಕ್ಷೆ ವರದಿ ಬಗ್ಗೆ ಅಪಸ್ವರಗಳು ಕೇಳಿಬಂದಿದ್ದವು. ಹೀಗಾಗಿ ಆ ಜಾತಿ ಸಮೀಕ್ಷೆ ಬೇಡ. ಹೊಸದಾಗಿ ಜಾತಿ ಸಮೀಕ್ಷೆ ಮಾಡಿ ಎಂದು ನಿನ್ನೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಗೆ ಸೂಚನೆ ನೀಡಿತ್ತು.
ಇದರ ಬೆನ್ನಲ್ಲೇ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಕಳೆದ ಬಾರಿ ಜಾತಿ ಸಮೀಕ್ಷೆ 180 ಕೋಟಿ ಖರ್ಚಾಗಿತ್ತು. ಈ ಬಾರಿ ಮತ್ತೆ ಜಾತಿ ಸಮೀಕ್ಷೆ ಮಾಡಲು 300 ಕೋಟಿ ರೂ.ಗಳಷ್ಟು ಖರ್ಚು ನಿರೀಕ್ಷಿಸಲಾಗಿದೆ. ಇದರಿಂದ ಜನರ ತೆರಿಗೆ ದುಡ್ಡು ದಂಡ ಎಂದು ಜನರು ಕಿಡಿ ಕಾರುತ್ತಿದ್ದಾರೆ.
ಈ ಬಗ್ಗೆ ಇಂದು ಸಚಿವ ಸತೀಶ್ ಜಾರಕಿಹೊಳಿಯವರನ್ನು ಪ್ರಶ್ನಿಸಿದಾಗ ಏನೂ ಮಾಡಕ್ಕಾಗಲ್ಲ. ಸ್ವಲ್ಪ ಖರ್ಚಾಗ್ತದೆ. ಆದರೆ ಕಳೆದ ಜಾತಿ ಗಣತಿ ವರದಿ ಹಲವು ಸಮುದಾಯಗಳಿಂದ ವಿರೋಧವಿತ್ತು. ನಮ್ಮ ಜನಸಂಖ್ಯೆ ಜಾಸ್ತಿಯಿದೆ ಎಂದಿದ್ದರು. ಹೀಗಾಗಿ ಈಗ ಮತ್ತೆ ಸ್ವಲ್ಪ ಖರ್ಚಾಗಬಹುದು. ಏನೂ ಮಾಡಕ್ಕಾಗಲ್ಲ. ಹೊಸದಾಗಿ ಜಾತಿ ಗಣತಿ ಮಾಡಬೇಕಾಗುತ್ತದೆ ಎಂದಿದ್ದಾರೆ.