Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮತಾಂತರ ನಿಷೇಧ ಕಾಯ್ದೆ ಆರ್ಎಸ್ಎಸ್ ಅಜೆಂಡಾ ಎಂದು ಟೀಕಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಚಿವ ಡಾ. ಅಶ್ವತ್ಥ್ ನಾರಾಯಣ್ ತಿರುಗೇಟು ನೀಡಿದ್ದಾರೆ. ಆರ್ಎಸ್ಎಸ್ ದೇಶದ ಅಭಿವೃದ್ಧಿ ಬಯಸಿದೆ. ಹೀಗಾಗಿ ಮತಾಂತರ ನಿಷೇಧ ಕಾಯ್ದೆ ಕೂಡ ಆರ್ಎಸ್ಎಸ್ ಅಜೆಂಡಾ ಎಂಬುದಾಗಿ ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ. ಮತಾಂತರ ನಿಷೇಧ ಮಸೂದೆ ಮಂಡನೆಯ ಬಳಿಕ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಈ ಕಾನೂನು ಸಮಾಜದ ಪರವಾಗಿದೆ. ಮತಾಂತರ ನಿಷೇಧದ ಬಗ್ಗೆ ಸಂವಿಧಾನದಲ್ಲೇ ಇದೆ. ಹೆಚ್ಚಿನ ಸ್ಪಷ್ಟತೆ ಕೊಡೋದಕ್ಕೆ ಈ ಕಾಯ್ದೆ ಜಾರಿಗೆ ತಂದಿದ್ದೇವೆ. ಇದು ಆರ್ಎಸ್ಎಸ್ ಅಜೆಂಡಾ ಎಂದು ಒಪ್ಪಿಕೊಳ್ಳುತ್ತೇನೆ ಎಂದರು. ಯಾವುದೇ ಆಮಿಷಕ್ಕೆ, ಒತ್ತಡಕ್ಕೆ ಒಳಗಾಗಿ ಮತಾಂತರ ಆಗಬಾರದು. ಇದು ಸಮಾಜದ ಸಂಸ್ಕೃತಿಗೆ ಪೂರಕವಾಗಿರುವುದಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಈ ಮಸೂದೆ ಜಾರಿಗೆ ತರಬೇಕು ಎಂದು ಈ ಹಿಂದೆ ಪ್ರಯತ್ನಿಸಿದ್ದರು. ಸಮಾಜಕ್ಕೆ ಒಳಿತಾಗುವ ಮಸೂದೆ ಇದು ಎಂದರು.