Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ರಾಜಧಾನಿಯಲ್ಲಿ ಮತ್ತೆ ಶುರುವಾಯ್ತಾ ರೌಡಿಗಳ ದ್ವೇಷ ಎನ್ನುವ ಮಾತು ಮುನ್ನೆಲೆಗೆ ಬಂದಿದ್ದ ಹಿನ್ನೆಲೆ, ಬುಧವಾರದ ಸಭೆಯಲ್ಲಿ ಎಲ್ಲ ಡಿಸಿಪಿಗಳಿಗೂ ಕಮಿಷನರ್ ಎಚ್ಚರಿಕೆ ನೀಡಿರುವುದು ಬೆಳಕಿಗೆ ಬಂದಿದೆ. ರೌಡಿಗಳ ಆ್ಯಕ್ಟಿವಿಟಿ ಮೇಲೆ ಕಣ್ಣಿಡಲು ಖಡಕ್ ಸೂಚನೆಯನ್ನು ಮಂಗಳವಾರ ನಡೆದ ವಾರದ ಪೊಲೀಸ್ ಸಭೆಯಲ್ಲಿ ಕಮಲ್ ಪಂತ್ ರವಾನಿಸಿದ್ದಾರೆ.
ಇತ್ತೀಚೆಗೆ ಮುಖ್ಯವಾಗಿ ರಶೀದ್ ಮಲಬಾರಿ ಸಹಚರ ಕರೀಂ ಅಲಿ, ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್, ಕೃಷ್ಣಮೂರ್ತಿ ಹಾಗೂ ಫೈನಾನ್ಶಿಯರ್ ಮದನ್ ಕೊಲೆಗಳು ನೆಡೆದಿವೆ.
ಜೂನ್ 22 ರಂದು ಗೋವಿಂದಪುರ ಠಾಣಾ ವ್ಯಾಪ್ತಿಯಲ್ಲಿ ನೆಡೆದ ಕರೀಂ ಅಲಿ ಕೊಲೆಯಿಂದ ಶುರುವಾದ ಗ್ಯಾಂಗ್ ವಾರ್ ಪ್ರಕರಣಗಳು ಮುಂದುವರೆದು ಕಾಟನ್ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಜೂನ್ 24ಕ್ಕೆ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ, ಜಯನಗರದಲ್ಲಿ ಜುಲೈ 2ರಂದು ಫೈನಾನ್ಶಿಯರ್ ಮದನ್ ಕೊಲೆ, ಡಿಜೆ ಹಳ್ಳಿಯಲ್ಲಿ 3 ನೇ ತಾರೀಖಿನಂದು ಕೃಷ್ಣ ಮೂರ್ತಿ ಮರ್ಡರ್, ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯಲ್ಲಿ ಜುಲೈ 7 ರಂದು ಮೃತ ಸ್ಲಂ ಭರತನ ಗ್ಯಾಂಗ್ ಹಾಗೂ ಟಿಂಬರ್ ಕಿಟ್ಟಿ ಹುಡುಗರ ನಡುವೆ ಗ್ಯಾಂಗ್ ವಾರ್ ಪ್ರಕರಣಗಳು ದಾಖಲಾಗಿವೆ.
ಇವುಗಳಲ್ಲಿ ಫೈನಾನ್ಶಿಯರ್ ಮದನ್ ಹಾಗೂ ರೇಖಾ ಕೊಲೆ ಹಾಡಹಗಲೇ ನಡೆದಿವೆ. ಬ್ಯಾಟರಾಯನಪುರದ ಗ್ಯಾಂಗ್ ವಾರ್ ಸಹ ಮಧ್ಯಾಹ್ನ ನಡೆದಿತ್ತು. ಉಳಿದಂತೆ ರಶೀದ್ ಮಲಬಾರಿ ಗ್ಯಾಂಗ್ ಹತ್ಯೆಗೆ ಜೈಲಿನಿಂದ ಪ್ಲಾನ್ ಮಾಡಲಾಗಿತ್ತು. ಹೀಗಾಗಿ ರೌಡಿಗಳ ಮೇಲೆ ಖಡಕ್ ಕ್ರಮಕ್ಕೆ ಕಮಲ್ಪಂತ್ ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಬುಧವಾರ ಡಿಸಿಪಿಗಳು ಸಂಬಂಧಪಟ್ಟ ಠಾಣೆಯ ಇನ್ಸ್ಪೆಕ್ಟರ್ಗೆ ಸೂಚನೆ ರವಾನಿಸಿರುವ ಮಾಹಿತಿ ಲಭ್ಯವಾಗಿದೆ.