Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ನಾನೇ ಮೇಧಾವಿ, ನಾನೇ ಬುದ್ಧಿವಂತ ಅಂದುಕೊಂಡಿದ್ದಾರೆ. ಅತಿಯಾದ ಬುದ್ಧಿವಂತಿಕೆ ಒಳ್ಳೆಯದಲ್ಲ.
ಸಚಿವರು ಇನ್ನೂ ಮುಂದಾದರೂ ಚೆನ್ನಾಗಿ ಕೆಲಸ ಮಾಡಿ. ಏನೇನೋ ಹೇಳಿಕೆ ನೀಡಿ ಸರ್ಕಾರಕ್ಕೆ ಮುಜುಗರ ತರಬೇಡಿ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ವಿರುದ್ಧ ಶಾಸಕ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಮಾಧುಸ್ವಾಮಿ ಸದನದ ಒಳಗೆ ವಿಪಕ್ಷಗಳನ್ನ ಸಮರ್ಥವಾಗಿ ಹಣಿಯುತ್ತಾರೆ. ಆದರೆ ಹೊರಗಡೆ ಯಾಕೆ ಈ ರೀತಿ ಹೇಳಿಕೆ ಕೊಡುತ್ತಾರೋ ಗೊತ್ತಿಲ್ಲ. ಯಾವ ಯಾವ ಕಾರಣಕ್ಕೋ ಸಚಿವರಾಗಿದ್ದಾರೆ. ಈ ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡ್ತೀವಿ. ಹಾದಿ ಬೀದಿಯಲ್ಲಿ ಚರ್ಚೆ ಮಾಡಲ್ಲ ಎಂದು ಗರಂ ಆದರು.
ನಮ್ಮ ಸರ್ಕಾರ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಕೇವಲ ಘೋಷಣೆ ಮಾಡಿಲ್ಲ, ಅನುಷ್ಠಾನಕ್ಕೆ ತಂದಿದ್ದೇವೆ. ಸಿಎಂ ಬೊಮ್ಮಾಯಿ ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ. ನೋ ಅಡ್ಜಸ್ಟ್ಮೆಂಟ್ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಅಂತಾ ನಿಮ್ಮ ತಂದೆ-ತಾಯಿ ದೇವರ ಹೆಸರು ಇಟ್ಟಿದ್ದಾರೆ. ಸಿದ್ದರಾಮಯ್ಯಗೆ ಅಧಿಕಾರದ ಹುಚ್ಚು. ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಸಿದ್ದರಾಮಯ್ಯ ಭ್ರಮೆಯಲ್ಲಿ ಇದ್ದಾರೆ ಎಂದರು.