Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಂಡ್ಯ : ಬೇಸಿಗೆ ಬಂತು ಅಂದ್ರೆ ಸಾಕು ಜನರು ಬೀಚ್ಗಳ ಕಡೆ ಮುಖ ಮಾಡ್ತಾರೆ. ಆದ್ರೆ ರಂಗನತಿಟ್ಟು ಪಕ್ಷಿಧಾಮ ಬೇಸಿಗೆಯಲ್ಲೂ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಸೆಳೆಯುತ್ತಿದೆ.
ನೀರಿನ ಮಧ್ಯೆ ಬಣ್ಣ-ಬಣ್ಣದ ಪಕ್ಷಿಗಳ ಕಲರವ, ಗೂಡು ನಿರ್ಮಾಣಕ್ಕೆ ಕಡ್ಡಿಗಳನ್ನು ತರುತ್ತಿರುವ ಕೆಲ ಪಕ್ಷಿಗಳು, ತನ್ನ ಮರಿಗಳನ್ನು ಸಂರಕ್ಷಣೆ ಮಾಡುತ್ತಿರುವ ತಾಯಿ, ಸಂತಾನೋತ್ಪತ್ತಿ ಮಾಡುತ್ತಿರುವ ಜೋಡಿ ಹಕ್ಕಿಗಳು, ಮೀನಿನ ಭೇಟೆಗಾಗಿ ಹೊಂಚು ಹಾಕುತ್ತಿರುವ ಮತ್ತಷ್ಟು ಪಕ್ಷಿಗಳು, ಈ ಮಧ್ಯ ಭಯ ಹುಟ್ಟಿಸುವ ಹಾಗೆ ಮಲಗಿರುವ ಮೊಸಳೆಗಳು, ನೀರಿನಲ್ಲಿ ಮುಳುಗೇಳುತ್ತಿರುವ ನೀರು ನಾಯಿ.
ಈ ದೃಶ್ಯ ಕಾಣಲು ಸಿಗುವುದು ರಂಗನತಿಟ್ಟು ಪಕ್ಷಿಧಾಮದಲ್ಲಿ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮ ಬೇಸಿಗೆಗಾಲದಲ್ಲೂ ಪಕ್ಷಿಗಳ ಕಲರವ ಹಾಗೂ ಕಾವೇರಿ ತಾಯಿಯಿಂದ ಕಂಗೊಳಿಸುತ್ತಿದೆ.
ಸದ್ಯ ರಂಗನತಿಟ್ಟು ಪಕ್ಷಿಧಾಮಕ್ಕೆ ಡಿಸೆಂಬರ್ ತಿಂಗಳಿನಿಂದ ಮೇ ತಿಂಗಳವರೆಗೆ ದೇಶ-ವಿದೇಶದಿಂದ ಆಹಾರಕ್ಕಾಗಿ ಹಾಗೂ ಸಂತಾನೋತ್ಪತ್ತಿಗಾಗಿ ಬರುತ್ತವೆ. ಹೀಗಾಗಿ ಈ ಆರು ತಿಂಗಳ ಕಾಲ ರಂಗನತಿಟ್ಟು ಪಕ್ಷಿಧಾಮದಕ್ಕೆ ಪ್ರಕೃತಿ ದೇವತೆಯೇ ಧರಗೆ ಇಳಿದು ಬಂದ ಹಾಗೆ ಭಾವಿಸುತ್ತದೆ.
ಈಗ ಪೆಲಿಕಾನ್, ಓಪನ್ ಬಿಲ್ ಸ್ಟಾರ್ಕ್, ಸ್ಫೂನ್ ಬಿಲ್, ಕಾರ್ಮಾರೆಂಟ್, ಐಬಿಸ್, ಇಗ್ರೀಟ್, ಕಿಂಗ್ ಫಿಶರ್, ಪೆಂಟೆಂಡ್ ಸ್ಟಾಕ್ ಸೇರಿದಂತೆ 170 ಬಗೆಯ ಲಕ್ಷಾಂತರ ಪಕ್ಷಿಗಳು ರಂಗತಿಟ್ಟಿನ 25 ನಡುಗಡ್ಡೆಗಳಲ್ಲಿ ವಾಸ ಮಾಡುತ್ತಿವೆ. ಇದಲ್ಲದೇ ರಂಗನತಿಟ್ಟಿನಲ್ಲಿ 100ಕ್ಕೂ ಹೆಚ್ಚು ಮೊಸಳೆಗಳು ಸಹ ವಾಸವಾಗಿದ್ದು, ಅಲ್ಲಲ್ಲಿ ಕಾಡು ನಾಯಿಗಳು ನೀರಿನಲ್ಲಿ ಮುಳುಗೇಳುವ ದೃಶ್ಯಗಳು ಸಹ ಗೋಚರಿಸುತ್ತಿದೆ.
ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ರಂಗನತಿಟ್ಟು ಪಕ್ಷಿಧಾಮಕ್ಕೆ ಹರಿದು ಬರುತ್ತಿದ್ದಾರೆ.