Publish Date: Thu, 16 Oct 2025 (16:58 IST)
Updated Date: Thu, 16 Oct 2025 (17:01 IST)
ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಆರ್ ಎಸ್ಎಸ್ ಚಟುವಟಿಕೆಗಳಿಗೆ ನಿಷೇಧ ಹೇರಿದ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಇದು ಕೇವಲ ಆರ್ ಎಸ್ಎಸ್ ಗೆ ಮಾತ್ರವಾ ಬೇರೆ ಧರ್ಮದ ಸಂಘಟನೆಗೆ ಅನ್ವಯಿಸುತ್ತಾ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.
ಆರ್ ಎಸ್ಎಸ್ ಚಟುವಟಿಕೆಗಳಿಗೆ ನಿಷೇಧ ಹೇರುತ್ತಾರೆ ಎಂಬ ಸುದ್ದಿ ಬೆನ್ನಲ್ಲೇ ಸಾರ್ವಜನಿಕವಾಗಿ ಇದು ಬೇರೆ ಧರ್ಮಕ್ಕೂ ಅನ್ವಯಿಸುತ್ತಾ? ಕೇವಲ ಆರ್ ಎಸ್ಎಸ್ ಗೆ ಮಾತ್ರ ಯಾಕೆ? ರಾಜಕೀಯ ಪಕ್ಷಗಳ ಸಮಾವೇಶಗಳಿಗೂ ಬ್ರೇಕ್ ಬೀಳಲಿ, ಅನ್ಯ ಧರ್ಮದವರ ಪ್ರಾರ್ಥನೆಗಳಿಗೂ ಬ್ರೇಕ್ ಹಾಕಲಿ ಎಂದು ಆಗ್ರಹಿಸಿದ್ದರು.
ಇದಕ್ಕೀಗ ಪ್ರಿಯಾಂಕ್ ಖರ್ಗೆ ಉತ್ತರಿಸಿದ್ದಾರೆ. ಶಾಲೆ ಇರೋದು ಯಾಕೆ? ಶಿಕ್ಷಣದ ಕೆಲಸಕ್ಕೆ. ಅಲ್ಲಿ ಇವರು ಆರ್ ಎಸ್ಎಸ್ ಚಟುವಟಿಕೆ ಮಾಡುವುದು ಯಾಕೆ? ಸಾರ್ವಜನಿಕ ಸ್ಥಳಗಳಲ್ಲಿ ಲಾಠಿ ಹಿಡಿದುಕೊಂಡು ಓಡಾಡುವುದು ಯಾಕೆ? ಇದಕ್ಕೆಲ್ಲಾ ನಾವು ಕಡಿವಾಣ ಹಾಕಿದ್ದೇವಷ್ಟೇ.
ಯಾರೇ ಇರಲಿ, ಯಾವುದೇ ಧರ್ಮ ಇರಲಿ ಇದು ಅನ್ವಯಿಸುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಡಲೇಬೇಡಿ ಎಂದು ನಾವು ಹೇಳುತ್ತಿಲ್ಲ. ಅದಕ್ಕೆ ಸರ್ಕಾರದ ಒಪ್ಪಿಗೆ ಪಡೆಯಿರಿ ಎಂದಷ್ಟೇ ಹೇಳುತ್ತಿದ್ದೇವೆ. ಒಪ್ಪಿಗೆ ಪಡೆದುಕೊಂಡು ಕಾರ್ಯಕ್ರಮ ಮಾಡಿ. ನಾವೇನು ಬಿಜೆಪಿ ಅಥವಾ ಆರ್ ಎಸ್ಎಸ್ ನನ್ನೇ ನಿಷೇಧ ಮಾಡಿಲ್ಲ ಎಂದಿದ್ದಾರೆ.