Publish Date: Sat, 20 Aug 2022 (17:42 IST)
Updated Date: Sat, 20 Aug 2022 (17:44 IST)
ಸ್ವಪಕ್ಷದ ನಾಯಕರ ಮೇಲೆ ಓಲೆಕಾರ್ ತಿರುಗಿ ಬಿದ್ದಿದ್ದು, ಸಿಎಂ ಬಸವರಾಜ ಬೊಮ್ಮಾಯಿಗೆ ಕಪ್ಪುಬಟ್ಟೆ ಪ್ರದರ್ಶನದ ಎಚ್ಚರಿಕೆಯನ್ನು ನೀಡಿದ್ದಾರೆ. ನಾಳೆ ಹಾವೇರಿಯಲ್ಲಿ ವಕೀಲರ ಸಂಘದ ಕಚೇರಿ ಉದ್ಘಾಟನಾ ಸಮಾರಂಭ ನಡೆಸಲಾಗ್ತಿದೆ. ಸ್ಥಳೀಯ ಶಾಸಕರನ್ನು ನಿರ್ಲಕ್ಷ್ಯ ಮಾಡಿ ಕೇವಲ ಕೆಲವು ಜನರ ಹೆಸರು ಹಾಕಿ ಕಾರ್ಯಕ್ರಮ ಮಾಡ್ತಿದ್ದಾರೆ, ಇದು ದುರಂತದ ಸಂಗತಿ ಎಂದು ಶಾಸಕ ನೆಹರೂ ಓಲೆಕಾರ್ ಹೇಳಿದ್ರು. ಹಾವೇರಿಯಲ್ಲಿ ಮಾತನಾಡಿದ ಅವರು, ದಿವಂಗತ ಸಿ.ಎಂ ಉದಾಸಿಯವರು ಇದ್ದ ಸಂದರ್ಭದಲ್ಲಿ ಹಾವೇರಿ ಕೋರ್ಟ್ ಕಟ್ಟಡ ವಿವಾದ ಬಗೆಹರಿಸಿ ಕಟ್ಟಡ ಕಟ್ಟಲು 25 ಕೋಟಿ ಮಂಜೂರು ಮಾಡಿದ್ದರು. ಆದರೆ ವಕೀಲರ ಸಂಘದ ಕಚೇರಿಗೆ ಅವಕಾಶ ಇರಲಿಲ್ಲ. ವಕೀಲರ ಸಂಘದ ಕಚೇರಿಗೆ ಸುಮಾರು ಏಳೂವರೆ ಕೋಟಿ ಮಂಜೂರು ಮಾಡಿಸಿದ್ದೆ. ಸ್ಥಳೀಯ ಶಾಸಕರನ್ನು ಕಡೆಗಣಿಸಿ ಉದ್ಘಾಟನಾ ಸಮಾರಂಭ ಇಟ್ಟುಕೊಂಡಿದ್ದಾರೆ. ಇದು ಅಕ್ಷ್ಯಮ್ಯ ಅಪರಾಧ ಎಂದು ಗುಡುಗಿದ್ರು. ನಾಳೆ ನಡೆಯುವ ಕಾರ್ಯಕ್ರಮದ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನ ಮಾಡುವ ಮೂಲಕ ಕಾರ್ಯಕರ್ತರು ವಿಷಾದ ವ್ಯಕ್ತಪಡಿಸಲಿದ್ದಾರೆ ಎಂದು ಅವರು ತಿಳಿಸಿದ್ರು.