Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಹಿಜಾಬ್ ಮತ್ತು ಕೇಸರಿ ಶಾಲು ವಿರೋಧದ ಸಂಬಂಧ ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಹಿಜಾಬ್ ಪ್ರಕರಣದ ಹಿಂದೆ ಕಾಂಗ್ರೆಸ್ ನ ಷಡ್ಯಂತ್ರ ಇದ್ದು, ಕಾಂಗ್ರೆಸ್ ನ ಒಂದು ವರ್ಗ ಪ್ರಚೋದನೆ ನೀಡುತ್ತಿದೆ.
ಡಿಕೆಶಿ ತಮ್ಮ ಲಾಭಕ್ಕೆ ಏನು ಬೇಕೋ ಅದನ್ನು ಹೇಳುತ್ತಾರೆ ಎಂದು ಕಿಡಿಕಾರಿದರು. ಇನ್ನೂ ರಾಷ್ಟ್ರಧ್ವಜ ಇಳಿಸುವುದು ತಪ್ಪು, ಅದರಂತೆ ಖಾಲಿ ಕಂಬದಲ್ಲಿ ಕೇಸರಿ ಧ್ವಜ ಹಾರಿಸುವುದು ತಪ್ಪೇ, ಯಾರು ಇದನ್ನು ಒಪ್ಪುವುದಿಲ್ಲ ಎಂದು ಹೇಳಿದರು. ಹಿಜಾಬ್ ಮತ್ತು ಕೇಸರಿ ಎರಡು ಕೂಡ ಕಾಲೇಜು ಕ್ಯಾಂಪಸ್ ನಲ್ಲಿ ಬರಬಾರದು. ಇನ್ನೂ ಈ ಪ್ರಕರಣ ಕೋರ್ಟ್ ನಲ್ಲಿದೆ ಕೋರ್ಟಿನ ತೀರ್ಪಿಗೆ ನಾವು ಬದ್ಧ ಎಂದರು. ಅಲ್ಲದೇ ಕಾಂಗ್ರೆಸ್ ನಲ್ಲಿ ಎರಡು ವರ್ಗಗಳಿವೆ ಒಂದು ವರ್ಗ ಹಿಜಾಬ್ ಗೆ ಪ್ರಚೋದನೆ ಕೊಡತ್ತೆ, ಮತ್ತೊಂದು ವರ್ಗ ರಾಜಕೀಯ ಆಗುತ್ತೆ ಬೇಡ ಅಂತಾರೆ ಅವರೇ ದ್ವಂದ್ವ ನಿಲುವಿನಲ್ಲಿ ಇದ್ದಾರೆ. ಸರ್ಕಾರದ ಆದೇಶ ದಿಕ್ಕರಿಸಿ, ಕಾಂಗ್ರೆಸ್ ಪ್ರಚೋದನೆ ಕೊಡುವುದು ಸರಿಯಲ್ಲ ಎಂದು ಸಚಿವ ಅಶೋಕ್ ಮಾಹಿತಿ ನೀಡಿದ್ದಾರೆ.