Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಸರ್ಕಾರ ಹೊಸ ಯುವ ನೀತಿಯನ್ನು ತರಲು ಉದ್ದೇಶಿಸಿದ್ದು, ಮುಂಬರುವ ವರ್ಷಗಳಲ್ಲಿ ಈ ನೀತಿ ಯುವಕರಿಗೆ ಮಾದರಿ ರೀತಿಯಲ್ಲಿ ಮಾರ್ಗದರ್ಶನ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಸ್ವಾಮಿ ವಿವೇಕಾನಂದರ 159 ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವರ್ಚುಯಲ್ ಆಗಿ ಭಾಗವಹಿಸಿ ಮಾತನಾಡಿದ ಅವರು, ಯುವಕರಿಗಾಗಿ ತತ್ವಾಧಾರಿತವಾದಂತಹ ವೈಚಾರಿಕೆ ನೆಲೆಯಲ್ಲಿ ಹೆಚ್ಚಿನ ಬೆಂಬಲ, ಪ್ರೋತ್ಸಾಹ ನೀಡಲು ಸರ್ಕಾರ ಸಿದ್ಧವಿದೆ.
ಈ ದಿಸೆಯಲ್ಲಿ ವಿಶೇಷ ಯೋಜನೆಯೊಂದನ್ನು ಮುಂದಿನ ಆಯವ್ಯಯದಲ್ಲಿ ತರಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ನಮ್ಮ ಜೀವನದಲ್ಲಿ ಸ್ವಾಮಿ ವಿವೇಕಾನಂದರು ಸದಾ ಪ್ರಸ್ತುತವಾಗಿರುತ್ತಾರೆ.
ಸಾರ್ಥಕತೆಯ ಹಾಗೂ ಸಾಧನೆಯ ಬದುಕನ್ನು ನಡೆಸಿ ಹಾಗೂ ಸಾವಿನ ನಂತರವೂ ಬದುಕುವ ರೀತಿಯನ್ನು ತಿಳಿಸಿದ್ದಾರೆ.
ಸ್ವಾಮಿ ವಿವೇಕಾನಂದರ ಲೈಫ್ ಆಫ್ಟರ್ ಡೆತ್ ಎಂಬ ಪುಸ್ತಕವನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, ವಿವೇಕಾನಂದರ ಸಾವಿನ ನಂತರದ ಬದುಕು ಎನ್ನುವ ಕಲ್ಪನೆ ಅದ್ಬುತವಾದದ್ದು.
ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವುದು ಸಾಧನೆ ಎಂಬುದನ್ನು ಪ್ರತಿಪಾದಿಸಿದ್ದರು. ಚೈತನ್ಯಮಯ ಬದುಕಿನ ದಾರಿಯನ್ನು ತೋರಿಸಿಕೊಟ್ಟಿದ್ದಾರೆ. ಸ್ವಾಮಿ ವಿವೇಕಾನಂದರ ಬದುಕಿನ ರೀತಿ ನೀತಿಗಳನ್ನು ಯುವಜನತೆಗೆ ಮನದಟ್ಟು ಮಾಡುವ ಕೆಲಸ ಮಾಡಬೇಕಿದೆ.