Publish Date: Thu, 07 Mar 2019 (15:38 IST)
Updated Date: Thu, 07 Mar 2019 (15:40 IST)
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾರು ಯಾರು ಸ್ಪರ್ಧೆ ಮಾಡಲಿದ್ದಾರೆ. ಆಕಾಂಕ್ಷಿಗಳು ಯಾರು ಯಾರು ಅಂತ ಹೆಸರುಗಳನ್ನು ಸಚಿವೆ ಜಯಮಾಲಾ ಬಹಿರಂಗಪಡಿಸಿದ್ದಾರೆ.
ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಿಂದ ನಾಲ್ವರು ಆಕಾಂಕ್ಷಿಗಳ ಹೆಸರುಗಳನ್ನು ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಉಡುಪಿಯಲ್ಲಿ ಬಹಿರಂಗಪಡಿಸಿದ್ದಾರೆ.
ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಬಳಿಕ ಸಚಿವೆ ಜಯಮಾಲಾ, ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ್ರು. ಲೋಕಸಭಾ ಚುನಾವಣೆಗೆ ನಮ್ಮ ಪಕ್ಷದಿಂದ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ರಾಜ್ಯ ಎನ್ಆರ್ಐ ಸೆಲ್ನ ಅಧ್ಯಕ್ಷೆ ಆರತಿ ಕೃಷ್ಣ ಹಾಗೂ ಚಿಕ್ಕಮಗಳೂರು ಡಿಸಿಸಿ ಅಧ್ಯಕ್ಷ ಡಾ.ವಿಜಯ ಕುಮಾರ್ ಈ ನಾಲ್ಕು ಮಂದಿ ಸ್ಪರ್ಧಾಕಾಂಕ್ಷಿಗಳ ರೇಸ್ನಲ್ಲಿದ್ದಾರೆ. ಅಂತಿಮವಾಗಿ ಯಾರು ಸ್ಪರ್ಧಿಸಬೇಕೆನ್ನುವುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಎಂದರು.
ಲೋಕಸಭಾ ಚುನಾವಣೆಯ ಸ್ಪರ್ದೆಯಲ್ಲಿ ತಮ್ಮ ಹೆಸರು ಕೇಳಿ ಬರುತ್ತಿದೆ ಎಂಬ ಪತ್ರಕರ್ತರ ಪ್ರೆಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಪಕ್ಷದ ಬಗ್ಗೆ ನಾನು ಯಾವಗಲೂ ಅಭಾರಿ. ನಾನು ಲೋಕಸಭಾ ಟಿಕೇಟ್ ಅಕಾಂಕ್ಷಿ ಅಲ್ಲ. ಪಕ್ಷ ಟಿಕೇಟು ನೀಡೋ ತೀರ್ಮಾನ ಮಾಡಿದರೆ ಅಮೇಲೆ ಯೋಚನೆ ಮಾಡ್ತೇನೆ ಎಂದ್ರು.
ಉಡುಪಿಯ ಬಿಜೆಪಿ ಪಕ್ಷದಲ್ಲಿರುವ ಗೊಂದಲ, ಹಾಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ನಡೆಯುತ್ತಿರುವ ‘ಗೋ ಬ್ಯಾಕ್ ಶೋಭಾ’ ಅಭಿಯಾನದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಜಯಮಾಲ, ಅವರ ಜಗಳದಿಂದ ನಾವು ಲಾಭ ಪಡೆಯಬೇಕಿಲ್ಲ. ಬಿಜೆಪಿ ಪಕ್ಷ ಮಾಡಿರುವ, ಮಾಡುತ್ತಿರುವ ತಪ್ಪೇ ಕಾಂಗ್ರೆಸ್ಸಿಗೆ ಈ ಬಾರಿ ಚುನಾವಣೆಯಲ್ಲಿ ಲಾಭ ತರಲಿದೆ ಎಂದರು.