Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಳಗಾವಿ : ಹಣವನ್ನು ವಾಪಸ್ ನೀಡುವಂತೆ ಕೇಳಿದ ವ್ಯಕ್ತಿಯನ್ನು ಮಹಿಳೆಯೊಬ್ಬಳು ಹತ್ಯೆ ಮಾಡಿದ ಘಟನೆ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಬಸೂರ್ತಿ ಗ್ರಾಮದ ಗಜಾನನ ನಾಯಕ(48) ಕೊಲೆಯಾದ ದುರ್ದೈವಿ ಹಾಗೂ ವಿದ್ಯಾಪಾಟೀಲ್ ಆರೋಪಿ. ಗಜಾನನ ಅವರು ಎರಡು ಮದುವೆಯಾಗಿದ್ದರು. ಆದರೆ ಇಬ್ಬರೂ ಪತ್ನಿಯರೂ ಆತನನನ್ನು ಬಿಟ್ಟುಹೊಗಿದ್ದರು. ಆದರೆ ಗಜಾನನ 15 ವರ್ಷದ ಹಿಂದೆಯೇ ಎರಡನೇ ಹೆಂಡತಿಯ ಮಗನನ್ನು ಕರೆದುಕೊಂಡು ಬಂದು ಬೆಳಗಾವಿ ತಾಲೂಕಿನ ಬೆಳಗುಂದಿಯಲ್ಲಿ ಬೇಕರಿ ನಡೆಸಿ ಜೀವನ ಸಾಗಿಸುತ್ತಿದ್ದ.
ಹೀಗಿರುವಾಗ ವಿದ್ಯಾ ಪಾಟೀಲ್ ಬೇಕರಿಯಲ್ಲಿ ಕೆಲಸಕ್ಕೆ ಸೇರಿಕೊಂಡಳು. ಆನಂತರ ಇವರಿಬ್ಬರ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು. ಅವಳಿಗಾಗಿ ಗಜಾನನ ನಾಲ್ಕು ವರ್ಷದ ಹಿಂದೆ ಹಣ ಸೇರಿದಂತೆ ಮನೆಯನ್ನು ಕಟ್ಟಿಸಿಕೊಟ್ಟಿದ್ದ.
ಆದರೆ ಕೊರೊನಾ ಕಾರಣದಿಂದ ಬೇಕರಿ ವ್ಯಾಪಾರದಲ್ಲಿ ನಷ್ಟವಾಗಿ ಬೇಕರಿಯನ್ನು ಮಾರಾಟ ಮಾಡಿ, ರಿಯಲ್ ಎಸ್ಟೇಟ್ನ್ನು ಪ್ರಾರಂಭಿಸಿದ್ದ. ಬೇಕರಿ ಮುಚ್ಚಿದ್ದರಿಂದ ವಿದ್ಯಾ ಗೋವಾಕ್ಕೆ ಹೋಗಿದ್ದಳು. ಇದರಿಂದಾಗಿ ಗಜಾನನ ವಿದ್ಯಾ ಬಳಿ ತಾನು ಕೊಟ್ಟ ಹಣ ಹಾಗೂ ಮನೆಯನ್ನು ವಾಪಸ್ ನೀಡುವಂತೆ ಕೇಳಿದನು.
ಇದರಿಂದ ಕೋಪಗೊಂಡ ವಿದ್ಯಾ ಗಜಾನನನ್ನು ಕೊಲೆ ಮಾಡಿದ್ದಾಳೆ. ಜೊತೆಗೆ ಆತ ಪ್ರತಿದಿನ ಬರೆದಿಡುತ್ತಿದ್ದ ಡೈರಿ ಹಾಗೂ ಅವನ ಫೋನ್ನೊಂದಿಗೆ ಪರಾರಿಯಾಗಿದ್ದಾಳೆ ಎಂದು ಗಜಾನನ ಮಗ ಅವಧೂತ್ ಆರೋಪ ಮಾಡುತ್ತಿದ್ದಾನೆ. ಸದ್ಯ ಆರೋಪಿ ವಿದ್ಯಾಳ ಪತ್ತೆಗಾಗಿ ಶೋಧ ನಡೆಯುತ್ತಿದ್ದು, ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.