Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಖ್ಯಮಂತ್ರಿ ಸ್ಥಾನ ಅನ್ನುವುದು ಅಂಬಾರಿ ಇದ್ದಂತೆ. ಅದನ್ನು ದೊಡ್ಡ ಆನೆಯೇ ಹೊರಬೇಕು. ಮರಿ ಆನೆಗೆ ಹೊರಿಸಲು ಆಗಲ್ಲ ಎಂದು ಸಚಿವ ಸಿಪಿ ಯೋಗೇಶ್ವರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನ ಅನ್ನುವುದು ಸಂವೇದನಶೀಲ, ಆಲೋಚನೆಯುಳ್ಳ ಆನೆ ತೂಕದ ವ್ಯಕ್ತಿಗೆ ಸೂಕ್ತ. ಸಿಎಂ ಹುದ್ದೆ ವೈಭವ, ಪ್ರತಿಷ್ಠೆ ಅಲ್ಲ. ರಾಜ್ಯದ ಜನರ ಆಶೋತ್ತರಗಳನ್ನ ಈಡೇರಿಸುವಂತಿರಬೇಕು. ಆದರೆ ಈಗ ಹಾಗೆ ಆಗುತ್ತಿಲ್ಲ ಎಂದರು.
ಬದಲಾವಣೆ ಜಗದ ನಿಯಮ. ಅರ್ಜುನ ಅಭಿಮನ್ಯು ಕೆಲ ವರ್ಷ ಅಂಬಾರಿ ಹೊತ್ತವು. ಅಪ್ಪ ಹೊತ್ತ ಅಂತ ಮರಿ ಆನೆಗೆ ಅಂಬಾರಿ ಹೊರಿಸೋಕೆ ಆಗಲ್ಲ. ನನ್ನ ಹಣೆ ಬರಹ ಏನು ಮಾಡೋದು ದೇವಾಲಯದ ಗೋಪುರದ ಫೌಂಟೇನ್ ತರಹ ಆಗಿದ್ದೀನಿ. ನನ್ನ ಕಷ್ಟ ಯಾರು ಕೇಳ್ತಾರೆ ಎಂದು ಅವಲತ್ತುಗೊಂಡರು.
ಸಿದ್ದರಾಮಯ್ಯ ಪದೇ ಪದೇ 25 ಪರ್ಸೆಂಟ್ ಸರ್ಕಾರ ಅಂತಾರೆ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ನಮ್ಮನ್ನೆಲ್ಲಾ ಒಟ್ಟೊಟ್ಟಿಗೆ ಸೇರಿಸಿ ಹೇಳಬಾರದು. ವಿಜಯೇಂದ್ರಗೆ ಸರ್ಕಾರದಲ್ಲಿ ಯಾವುದೇ ಅಧಿಕೃತ ಹುದ್ದೆ ಇಲ್ಲ. ನಮಗಾಗುವ ಚಿತ್ರಹಿಂಸೆ ಯಾರಿಗೆ ಹೇಳೋದು. ನಮ್ಮ ಸರ್ಕಾರ ಬಂದರೂ ನಮ್ಮ ಸರ್ಕಾರ ಇದೆ ಎಂಬ ಭಾವನೆ ನಮಗಿಲ್ಲ. ನಮ್ಮ ಸರ್ಕಾರದಲ್ಲಿ ವಿಪಕ್ಷದವರ ಕೈ ಮೇಲಾಗುತ್ತಿದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಮೀಸಲಾತಿ ಸರ್ಕಾರ ಮಾಡಬೇಕು. ಆದರೆ ಕುಮಾರಸ್ವಾಮಿ ಹೇಳಿದಂತೆ ಮೀಸಲಾತಿ ಮಾಡಿದ್ದಾರೆ. ಅನುಕೂಲ ಬಂದಂತೆ ಮೀಸಲಾತಿ ಹಂಚಿಕೆ ಮಾಡಿದ್ದಾರೆ. ಸಾಮಾಜಿಕ ನ್ಯಾಯ ಆಗುತ್ತಿಲ್ಲ ಎಂದು ಯೋಗೇಶ್ವರ್ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ರಮೇಶ್ ಜಾರಕಿಹೊಳಿ ಷಡ್ಯಂತ್ರಕ್ಕೆ ಬಲಿ ಆಗಿರೋದು ನಿಜ. ಆದರೂ ಅವರಿಗೆ ನ್ಯಾಯ ಕೊಡುವಲ್ಲಿ ದುರುದ್ದೇಶದಿಂದ ನಿಧಾನ ಆಗುತ್ತಿದೆ ಎಂದು ಜಾರಕಿಹೊಳಿ ಪರ ಸಿ.ಪಿ.ಯೋಗೇಶ್ವರ್ ಬ್ಯಾಟ್ ಮಾಡಿದರು.