Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಳಗಾವಿ : ಕಲುಷಿತಗೊಂಡಿದ್ದ ಕುಡಿಯುವ ನೀರನ್ನು ಸೇವಿಸಿ ಅಸ್ವಸ್ಥಗೊಂಡಿದ್ದ 40 ಜನರ ಪೈಕಿ ಚಿಕಿತ್ಸೆ ಫಲಿಸದೇ ವೃದ್ಧರೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಬೆನ್ನೂರ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ಸುರೇಬಾನ ಪಂಚಾಯತಿ ವ್ಯಾಪ್ತಿಯ ಬೆನ್ನೂರ ಗ್ರಾಮದಲ್ಲಿ ಕಲುಷಿತ ನೀರನ್ನು ಸೇವಿಸಿ ಸುಮಾರು 40ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು.
ಅವರನ್ನು ರಾಮದುರ್ಗ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ, ಕಳೆದ ರಾತ್ರಿ ಚಿಕಿತ್ಸೆ ಫಲಿಸದೇ ಬೆನ್ನೂರ ಗ್ರಾಮದ ಬಸಪ್ಪ ಖಾನಾಪೂರ(85) ಸಾವನ್ನಪ್ಪಿದ್ದಾರೆ.
ಕಲುಷಿತ ಕುಡಿಯುವ ನೀರು ಸೇವಿಸಿದ 40ಕ್ಕೂ ಹೆಚ್ಚು ಜನ ಏಕಾಏಕಿ ವಾಂತಿಭೇದಿಯಿಂದ ಬಳಲುತ್ತಿದ್ದಾರೆ. ಸದ್ಯ ಎಲ್ಲರಿಗೂ ಚಿಕಿತ್ಸೆ ಮುಂದುವರೆದಿದ್ದು, ಇನ್ನೂ ಮೂವರ ಸ್ಥಿತಿ ಗಂಭೀರವಾಗಿದೆ.