Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಪ್ರೀತಿಸಿ ಮದುವೆಯಾಗಿ ಒಂದೇ ವರ್ಷಕ್ಕೆ ಪತಿ ಕೈಕೊಟ್ಟ ಹಿನ್ನೆಲೆಯಲ್ಲಿ, ಅತಂತ್ರಕ್ಕೆ ಸಿಲುಕಿದ ಪತ್ನಿ ಪತಿ ಸೇರಿ 16 ಮಂದಿ ವಿರುದ್ಧ ದೂರು ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹುಣಸೂರು ತಾಲೂಕಿನ ಮರೂರು ಗ್ರಾಮದ ಅಭಿಷೇಕ್ ಹಾಗೂ ಅಶ್ವಿನಿ ಪರಸ್ಪರ ಪ್ರೀತಿಸುತ್ತಿದ್ದ ಹಿನ್ನೆಲೆ ಉಭಯ ಕುಟುಂಬದವರ ಒಪ್ಪಿಗೆ ಮೇರೆಗೆ 2021 ಜೂನ್ ತಿಂಗಳಿನಲ್ಲಿ ಜೋಡಿ ಕೌಟುಂಬಿಕ ಜೀವನಕ್ಕೆ ಕಾಲಿಟ್ಟಿದ್ದರು. ಒಂದು ವರ್ಷ ದಾಂಪತ್ಯ ಜೀವನ ನಡೆಸಿದ ಅಭಿಷೇಕ್, ಜಾತಿ ಕಾರಣ ನೀಡಿ ಅಶ್ವಿನಿ ಮೇಲೆ ಇಲ್ಲಸಲ್ಲದ ಅಪಪ್ರಚಾರ ಮಾಡಿದ್ದಾರಂತೆ. ಅಲ್ಲದೇ ತನ್ನ ಮೇಲೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ.
ಪತಿ ಕುಟುಂಬದ ವಿರುದ್ಧ ಮಹಿಳೆ ಆರೋಪ
ಇನ್ನು, ತನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಅಭಿಷೇಕ್ ಮತ್ತೊಂದು ಮದುವೆಗೆ ಸಂಬಂಧ ಹುಡುಕುತ್ತಿದ್ದರು. ಈ ವಿಷಯ ತಿಳಿದು ನ್ಯಾಯ ಕೇಳಲು ಹೋದ ಅಶ್ವಿನಿಗೆ ಅತ್ತೆ ಮಾವ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪತಿ ಸೇರಿದಂತೆ 16 ಜನರ ವಿರುದ್ದ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಅಶ್ವಿನಿ ಪ್ರಕರಣ ದಾಖಲಿಸಿದ್ದಾರೆ.