Publish Date: Fri, 23 Jul 2021 (08:46 IST)
Updated Date: Fri, 23 Jul 2021 (08:50 IST)
ಬಾಗಲಕೋಟೆ(ಜು.23): ತಮಿಳುನಾಡಿನಿಂದ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ಪಟ್ಟಣಕ್ಕೆ ಬಂದಿದ್ದ ಸರಕು ತುಂಬಿದ ಲಾರಿಯಲ್ಲಿ ಮಹಿಳೆಯ ರುಂಡ ಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆಯ ರುಂಡ ಕಂಡ ಲಾರಿ ಚಾಲಕ ಇಳಕಲ್ಲ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾನೆ.
* ಬಾಗಲಕೋಟೆ ಜಿಲ್ಲೆಯ ಇಳಕಲ್ಲ ಪಟ್ಟಣದಲ್ಲಿ ನಡೆದ ಘಟನೆ
* ಗ್ರಾನೈಟ್ ಇಳಿಸುವ ಸಂದರ್ಭದಲ್ಲಿ ಮಹಿಳೆಯ ರುಂಡ ಇರುವ ಚೀಲ ಪತ್ತೆ
* ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು
ತಮಿಳುನಾಡಿನ ಮಧುರೈನಿಂದ ಇಳಕಲ್ಲ ಪಟ್ಟಣಕ್ಕೆ ಟಿಎನ್-52 ಆರ್-7952 ಸಂಖ್ಯೆಯ ಲಾರಿ ಗ್ರಾನೈಟ್ ತುಂಬಿಕೊಂಡು ಬಂದಿದೆ. ಗ್ರಾನೈಟ್ ಇಳಿಸುವ ಸಂದರ್ಭದಲ್ಲಿ ಮಹಿಳೆಯ ರುಂಡ ಇರುವ ಚೀಲ ಪತ್ತೆಯಾಗಿದೆ.
ಅಂದಾಜು 65 ರಿಂದ 70 ವರ್ಷದ ಅಪರಿಚಿತ ಮಹಿಳೆಯ ರುಂಡ ಇದಾಗಿದ್ದು, ತಲೆ ಕತ್ತರಿಸಿ ಚೀಲದಲ್ಲಿ ತುಂಬಿ ಯಾರೋ ಲಾರಿಯಲ್ಲಿ ದುಷ್ಕರ್ಮಿಗಳು ಎಸೆದಿರಬಹುದು. ಇಲ್ಲವೇ ಕೊಲೆ ಮಾಡಿ ಸಾಕ್ಷಿ ನಾಶಪಡಿಸುವ ಹಿನ್ನೆಲೆಯಲ್ಲಿ ಲಾರಿಯಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಲಾರಿ ಚಾಲಕ ರಾಜಾ ಕಲ್ಯಾಣ ಸುಂದರ ನೀಡಿರುವ ದೂರಿನನ್ವಯ ಇಳಕಲ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.