Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನ್ಯಾಯಾಲಯದ ಆವರಣದೊಳಗಿನ ವ್ಯಾಪ್ತಿಯಲ್ಲಿ ತಮ್ಮ ವಾಹನ ಪಾರ್ಕ್ ಮಾಡುವ ಹಕ್ಕನ್ನು ವಕೀಲರಿಗೆ ನೀಡಿಲ್ಲ ಎಂದು ಹೈಕೋರ್ಟ್ ಹೇಳಿದೆ. ಬೆಂಗಳೂರಿನ ವಕೀಲ ಎನ್ ಎಸ್ ವಿಜಯಂತ್ ಬಾಬು ಅವರು ಬೆಂಗಳೂರು ವಕೀಲರ ಸಂಘವು ತನ್ನ ಸದಸ್ಯರ ವಾಹನಗಳಿಗೆ ಹೊಸ ಸ್ಟಿಕರ್ ನೀಡುವುದಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಪಡಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ.
ನ್ಯಾಯಾಲಯದಲ್ಲಿ ವಾಹನ ನಿಲುಗಡೆಗೆ ಸೀಮಿತ ಪ್ರದೇಶವಿದ್ದು, ಇಲ್ಲಿ ವಾಹನಗಳ ಪ್ರವೇಶಕ್ಕೆ ನಿಯಂತ್ರಣ ಹೇರುವ ದೃಷ್ಟಿಯಿಂದ ಆಕ್ಷೇಪಿತ ಆದೇಶ ಮಾಡಲಾಗಿದೆ ಎಂದು ಪೀಠ ಹೇಳಿದೆ. "ಎಎಬಿ ಸದಸ್ಯರಾಗಿರುವವರಿಗೆ ಸ್ಟಿಕರ್ ನೀಡಿದ ಮಾತ್ರಕ್ಕೆ ಅಂಥ ವಕೀಲರು ನ್ಯಾಯಾಲಯದ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ಮಾಡಲು ಅರ್ಹರಾಗಿದ್ದಾರೆ ಎಂದರ್ಥವಲ್ಲ" ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.