Publish Date: Tue, 12 Feb 2019 (20:10 IST)
Updated Date: Tue, 12 Feb 2019 (20:12 IST)
ವಕೀಲರೊಬ್ಬರ ಮೇಲೆ ಹಲ್ಲೆ ಮಾಡಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ನೂರಾರು ವಕೀಲರು ಪ್ರತಿಭಟಿಸಿದ್ದಾರೆ.
ಚಾಮರಾಜನಗರದ ಜಿಲ್ಲಾ ನ್ಯಾಯಾಲಯದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಜಿಲ್ಲಾ ವಕೀಲರ ಸಂಘದ ಸದಸ್ಯರು, ತಮ್ಮ ಸಹೋದ್ಯೋಗಿ ವಕೀಲ ರವಿ ಎಂಬುವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಸುಳ್ಳು ದೂರು ದಾಖಲಿಸಿದ್ದಾರೆ. ಅಲ್ಲದೇ ಪ್ರಕರಣ ದಾಖಲಿಸದೇ, ಯಾವುದೇ ಸರ್ಚ್ ವಾರೆಂಟ್ ಇಲ್ಲದೇ ಮನೆಗೆ ನುಗ್ಗಿ, ವಕೀಲನ ಮೇಲೆ ಗುಂಡ್ಲುಪೇಟೆ ಇನ್ಸ್ಪೆಕ್ಟರ್ ಬಾಲಕೃಷ್ಣ ಹಲ್ಲೆ ನಡೆಸಿದ್ದು, ಠಾಣೆಯಲ್ಲೂ ಸಹ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ.
ಇದನ್ನು ಖಂಡಿಸಿ ಒಂದು ವಾರದಿಂದಲೂ ಕಲಾಪಗಳಿಂದ ದೂರ ಉಳಿದು ಗುಂಡ್ಲುಪೇಟೆ ಠಾಣೆಯ ಪಿಎಸ್ಐ ಮತ್ತು ಸಿಪಿಐ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೂ ಸಹ ಸೌಜನ್ಯಕ್ಕೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ನಮ್ಮನ್ನ ಮಾತನಾಡಿಸಿಲ್ಲ ಎಂದು ದೂರಿದರು. ಹಲ್ಲೆ ಮಾಡಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸದಿದ್ರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ವಕೀಲರ ಸಂಘ ಎಚ್ಚರಿಸಿದೆ.