Publish Date: Sun, 21 Aug 2022 (21:06 IST)
Updated Date: Sun, 21 Aug 2022 (21:08 IST)
ಕೇಂದ್ರ ಸರ್ಕಾರವೇ ಸದಾ ರಾಜ್ಯಗಳ ವಿರುದ್ಧ ಸಂಘರ್ಷಕ್ಕೆ ಇಳಿದರೆ ದೇಶ ಅಭಿವೃದ್ಧಿಯಾಗುವುದು ಹೇಗೆ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಾರ್ಟಿ ನಾಯಕ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದರು. ಕೇಂದ್ರ ಸರ್ಕಾರವು ರಾಜ್ಯಗಳಿಗೆ ತೊಂದರೆ ಕೊಡುತ್ತಿದೆ ಎಂದು ನೇರ ಆರೋಪ ಮಾಡಿದ ಅವರು, ಹಣದುಬ್ಬರ, ನಿರುದ್ಯೋಗದ ಬಿಸಿಗೆ ಸಾಮಾನ್ಯ ಜನರು ತತ್ತರಿಸಿದ್ದಾರೆ. ಈ ಹೊತ್ತಿನಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಜೊತೆಗೂಡಿ ಜನಹಿತಕ್ಕಾಗಿ ಶ್ರಮಿಸಬೇಕಿತ್ತು. ಆದರೆ ಇಲ್ಲಿ ಆಗುತ್ತಿರುವುದೇ ಬೇರೆ ಎಂದು ಅವರು ಟ್ವೀಟ್ ಮಾಡಿದ್ದಾರೆ..ದೆಹಲಿಯ ಉಪಮುಖ್ಯಮಂತ್ರಿ ಮತ್ತು ಆಪ್ ನಾಯಕ ಮನೀಶ್ ಸಿಸೊಡಿಯಾ ವಿರುದ್ಧ CBI ಲುಕ್ಔಟ್ ನೊಟೀಸ್ ಜಾರಿ ಮಾಡಿದ ನಂತರ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. CBI ಲುಕ್ಔಟ್ ನೊಟೀಸ್ ಜಾರಿ ಮಾಡಿರುವುದರಿಂದ ಮನೀಶ್ ಸಿಸೋಡಿಯಾ ವಿದೇಶಕ್ಕೆ ಹೋಗುವುದಕ್ಕೆ ನಿರ್ಬಂಧ ಬಂದಿದೆ. ಕೇಂದ್ರ ಸರ್ಕಾರದ ಸಚಿವರು ಮತ್ತು ಅಧಿಕಾರಿಗಳು ದೇಶ ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಹೋರಾಡುತ್ತಿಲ್ಲ. ಬದಲಿಗೆ ದೇಶದ ವಿರುದ್ಧವೇ ಹೋರಾಡುತ್ತಿದ್ದಾರೆ. ಕೇಂದ್ರೀಯ ತನಿಖಾ ದಳ ಜಾರಿ ನಿರ್ದೇಶನಾಲಯವನ್ನು ಈ ರೀತಿ ಹೆದರಿಸಲು ಬಳಸಿಕೊಂಡರೆ ದೇಶ ಉದ್ಧಾರವಾಗುವುದು ಹೇಗೆ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.