Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ಕರ್ನಾಟಕದ ಜನ ಒಂದೇ ದಿನದಲ್ಲಿ ಮೂರೂ ಹವಾಗುಣವನ್ನು ನೋಡುತ್ತಿದ್ದಾರೆ. ಇದೀಗ ಮತ್ತೆ ಮಳೆಯ ಮುನ್ಸೂಚನೆ ಸಿಕ್ಕಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೊನ್ನೆ ಸಂಜೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಒಂದು ರೀತಿಯ ಮೋಡ ಕವಿದ ವಾತಾವರಣವಿದೆ.
ಹವಾಮಾನ ವರದಿ ಪ್ರಕಾರ ನಿನ್ನೆಯಿಂದ ಐದು ದಿನಗಳ ಕಾಲ ಮಳೆಯ ಮುನ್ಸೂಚನೆಯಿದೆ. ಆದರೆ ನಿನ್ನೆ ಕೇವಲ ಮೋಡ ಕವಿದ ವಾತಾವರಣವಿತ್ತಷ್ಟೇ. ಇಂದೂ ಮೋಡ ಕವಿದ ವಾತಾವರಣದ ಜೊತೆಗೆ ಚಳಿಯೂ ಇದೆ.
ಇಂದು ಅಥವಾ ನಾಳೆ ಸಣ್ಣಮಟ್ಟಿಗೆ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಎರಡು ವಾರದ ಹಿಂದೆಯೂ ವಾಯುಭಾರ ಕುಸಿತ ಉಂಟಾಗಿ ಮಳೆಯಾಗಿತ್ತು. ಡಿಸೆಂಬರ್ ತಿಂಗಳಿನಿಂದ ಅಸಹಜವಾಗಿ ಮಳೆಯಾಗುತ್ತಿರುವುದು ಕೃಷಿಕರು, ಜನ ಸಾಮಾನ್ಯರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ.