Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ಕೊಡಬೇಕೆ ಬೇಡವೇ ಅನ್ನೋ ಬಗ್ಗೆ ಇಂದು ಸಿಎಂ ಬೊಮ್ಮಾಯಿ ಅನುಪಸ್ಥಿತಿಯಲ್ಲಿ ಕಂದಾಯ ಇಲಾಖೆ ಸಚಿವ ಆರ್. ಅಶೋಕ್ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್, ಶಾಸಕ ಜಮೀರ್ ಅಹ್ಮದ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. 75 ವರ್ಷಗಳಿಂದಲೂ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಿಲ್ಲ, ವಿರೋಧಿಸುತ್ತಲೇ ಬಂದಿದ್ದಾರೆ. ಕೋಳಿ ಕೇಳಿ ಮಸಾಲೆ ಅರೆಯೋಕೆ ಆಗುತ್ತಾ ಎಂದು ಟಾಂಗ್ ಕೊಟ್ಟಿದ್ದಾರೆ.
ಸಿಎಂ ಜೊತೆ ಸುಮಾರು 2 ಗಂಟೆಗಳ ಕಾಲ ಇದರ ಬಗ್ಗೆ ಚರ್ಚೆ ನಡೆಸಿದ್ದೇನೆ. ಇವತ್ತು ಸಭೆ ನಡೆಸುವಂತೆ ಸೂಚಿಸಿದ್ದರು. ಅದರಂತೆ ಸಭೆ ನಡೆಸಿದ್ದೇವೆ. ಸಭೆಯಲ್ಲಿ ಗಣೇಶೋತ್ಸವ ಮಾಡೋದಾದರೇ ಹೇಗೆ ಮಾಡಬೇಕು? ಮುಂಜಾಗ್ರತಾ ಕ್ರಮಗಳೇನು ತೆಗೆದುಕೊಳ್ಳಬೇಕು? ಎಲ್ಲಿ ಕೂರಿಸಬೇಕು? ಸಂಭ್ರಮಾಚರಣೆ ಬಗ್ಗೆ ಹಾಗೂ ಮೆರವಣಿಗೆ ಎಲ್ಲಿಂದ ಸಾಗಬೇಕು? ಹೀಗೆ ಪ್ರತಿಯೊಂದರ ಬಗ್ಗೆ ಇವತ್ತು ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.