Publish Date: Sat, 14 Aug 2021 (09:45 IST)
Updated Date: Sat, 14 Aug 2021 (09:49 IST)
ಚಿತ್ರದುರ್ಗ(ಆ.14): ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾತ್ವಿಕವಾಗಿ ಇಂಥ ವಿಚಾರಕ್ಕೆ ಹೆಚ್ಚು ಮಹತ್ವ ಕೊಡಬೇಕಾಗಿಲ್ಲ. ಸಚಿವ ಸಂಪುಟದ ಮುಂದೆ ಪ್ರಸ್ತಾಪ ಬಂದಾಗ ಉತ್ತರ ಹೇಳುವುದಾಗಿ ಹೇಳಿದ್ದಾರೆ.
ಇದೇವೇಳೆ ಸರ್ಕಾರದ ಯೋಜನೆಗಳು ವ್ಯಕ್ತಿಗತವಾಗಿರಬಾರದು. ರಾಷ್ಟ್ರೀಯ ಯೋಜನೆಗಳ ಗುರುತು ಪಡೆದುಕೊಳ್ಳಬೇಕು. ನಮ್ಮ ಪ್ರಧಾನಿ ಅವರು ಪ್ರಧಾನ ಮಂತ್ರಿ ಆವಾಜ್ ಯೋಜನೆ ಸೇರಿ ಇತರೆ ಯೋಜನೆ ತಂದಿದ್ದಾರೆ. ಅವು ಸರ್ಕಾರದ ಹೆಸರಿಗೆ ಸೇರುತ್ತವೆ. ಯೋಜನೆಗಳಿಗೆ ರಾಜಮನೆತನದಂತೆ ಮನೆತನದ ಹೆಸರಿಡುವುದು ಸರಿಯಲ್ಲ ಎಂದಿದ್ದಾರೆ.
ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಕುರಿತು ಈಗಾಗಲೇ ಚರ್ಚೆ ಶುರುವಾಗಿದ್ದು, ಬಹಳಷ್ಟು ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಿದರೆ ಬಿಜೆಪಿ ಅವಧಿಯಲ್ಲಿ ವಿವಿಧ ಯೋಜನೆಗಳಿಗೆ ಇಟ್ಟಿರುವ ಹೆಸರುಗಳಿಗೆ ಮಸಿ ಬಳಿದು ಹೋರಾಟ ಮಾಡುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಇಂದಿರಾ ಕ್ಯಾಂಟೀನ್ಗೆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಹೆಸರು ಬದಲಾಯಿಸುವ ಸುಳಿವು ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹೆಸರನ್ನು ಬೇಕಾದರ ಬಾರ್ಗೆ ಇಡಿ ಎಂದಿದ್ದಾರೆ.