Publish Date: Tue, 23 Nov 2021 (15:05 IST)
Updated Date: Tue, 23 Nov 2021 (15:08 IST)
ಮಂಡ್ಯ : ಮಳವಳ್ಳಿ ತಾಲೂಕಿನ ದ್ಯಾವಪಟ್ಟಣ ಗ್ರಾಮದಲ್ಲಿ ನಡೆದಿದ್ದ ಮಹಿಳೆಯ ನಿಗೂಢ ಹತ್ಯೆಯ ರಹಸ್ಯ ವಾರದ ಬಳಿಕ ಬಯಲಾಗಿದೆ.
ಪತ್ನಿಯನ್ನು ಪತಿರಾಯನೇ ಕೊಂದು, ವಿಷ ಸೇವಿಸಿ ತಾನೇ ಆಸ್ಪತ್ರೆ ಸೇರಿದ್ದು ಪ್ರಕರಣದ ರಹಸ್ಯಯವಾಗಿದೆ. 23 ವರ್ಷದ ಸಂಧ್ಯಾ ಗಂಡನಿಂದಲೇ ಕೊಲೆಯಾಗಿರುವವರು. ಪ್ರಕರಣ ಏನೆಂದರೆ ಒಂದೂವರೆ ವರ್ಷದ ಹಿಂದಷ್ಟೇ ಮದ್ದೂರು ತಾಲೂಕಿನ ಹಾಗಲಹಳ್ಳಿ ಗ್ರಾಮದ ಷಡಕ್ಷರಿ ಎಂಬಾತನನ್ನು ಸಂಧ್ಯಾ ಮದುವೆಯಾಗಿದ್ದರು. ದಾಂಪತ್ಯದಲ್ಲಿ ಬಿರುಕು ಸೃಷ್ಟಿಯಾಗಿ ಇತ್ತೀಚೆಗೆ ಗಂಡ ಮತ್ತು ಹೆಂಡತಿ ದೂರವಾಗಿದ್ದರು. ಸಂಧ್ಯಾ ತಮ್ಮ ತವರಿನಲ್ಲಿ, ತಂದೆಯ ಮನೆಯಲ್ಲಿದ್ದುಕೊಂಡು ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದರು.
ನವೆಂಬರ್ 16ರಂದು ಕಂಪ್ಯೂಟರ್ ಕ್ಲಾಸ್ ಗೆ ಹೋಗಿದ್ದ ಸಂಧ್ಯಾ ನಿಗೂಢವಾಗಿ ನಾಪತ್ತೆಯಾಗಿದ್ದರು. ಮನೆಗೆ ಮಗಳು ಬಾರದಿದ್ದಕ್ಕೆ ಬೆಳಕವಾಡಿ ಪೊಲೀಸ್ ಗೆ ತಂದೆ ನಾಪತ್ತೆ ದೂರು ನೀಡಿದ್ದರು. ಮತ್ತೊಂದೆಡೆ, ಪತಿ ಷಕಡ್ಷರಿ ವಿಷ ಸೇವಿಸಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಸೇರಿದ್ದ.
ಆಸ್ಪತ್ರೆಯಿಂದ ಬಿಡುಗಡೆಯಾಗುವರೆಗೂ ಕಾದಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ತನಗೇನೂ ಗೊತ್ತಿಲ್ಲ ಎನ್ನುತ್ತಿದ್ದ ಹಂತಕ, ಪೊಲೀಸರ ಟ್ರಿಟ್ಮೆಂಟ್ ಬಳಿಕ ತಪ್ಪೊಪ್ಪಿಗೆ ನೀಡಿದ್ದಾನೆ.
ಪತಿ ಷಕಡ್ಷರಿ, ಕಂಪ್ಯೂಟರ್ ಕ್ಲಾಸ್ ನಿಂದ ಪತ್ನಿಯನ್ನು ಕರೆದುಕೊಂಡು ಬಂದು ಕೊಲೆ ಮಾಡಿದ್ದ. ಕುಂದೂರು ಬಳಿಯ ಬೆಟ್ಟದಲ್ಲಿ ಕೊಲೆ ಮಾಡಿ ನಾಲೆಗೆ ಹಾಕಿದ್ದ. ಮರ್ಡರ್ ಬಳಿಕ, ವಿಷ ಸೇವಿಸಿ ತಾನೇ ಆಸ್ಪತ್ರೆಗೆ ದಾಖಲಾಗಿದ್ದ. ಪ್ರಕರಣದಿಂದ ತಪ್ಪಿಸಿಕೊಳ್ಳಲು ಪ್ಲಾನ್ ಮಾಡಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ ಹಂತಕ ಪತಿ. ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.