Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಕುವೆಂಪು ಹಾಗೂ ಅವರು ಬರೆದ ನಾಡಗೀತೆಗೆ ಪಠ್ಯಪುಸ್ತಕದ ಹೆಸರಿನಲ್ಲಿ ನಡೆಯುತ್ತಿರುವ ಅಪಮಾನದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಪಠ್ಯ ಪುಸ್ತಕ ವಿಚಾರದಲ್ಲಿ ಗೊಂದಲ ಇದೆ. ನಾಡಗೀತೆ ವಿಚಾರದಲ್ಲಿ ಹಲವು ರೀತಿ ಕೆಟ್ಟ ಬೆಳೆವಣಿಗೆಗಳು ಆಗುತ್ತಿವೆ. ನಾಡಗೀತೆಗೆ ಅವಮಾನ ಮಾಡಲಾಗುತ್ತಿದೆ ಎಂದು ಅವರು ಕಿಡಿ ಕಾರಿದರು.
ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರವರ್ತಿ ಹೆಸರು ಹೇಳದೆಯೇ ತರಾಟೆಗೆ ತೆಗೆದುಕೊಂಡ ಅವರು, ಹಿಂದೆ ಸಾಮಾಜಿಕ ಜಾಲತಾಣದಲ್ಲಿ ನಾಡಗೀತೆ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಸಮಿತಿ ಅಧ್ಯಕ್ಷನನ್ನಾಗಿ ಮಾಡಿರುವುದೇ ತಪ್ಪು. ಕುವೆಂಪು ಮತ್ತು ನಾಡಗೀತೆಗೆ ಅಪಮಾನ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ನಾಡಗೀತೆ, ಕುವೆಂಪು ಅವರನ್ನು ಅಪಮಾನಿಸಿದ ಅವನನ್ನು ಮೊದಲು ಒದ್ದು ಒಳಕ್ಕೆ ಹಾಕಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯ ಮಾಡಿದರು.
ಯಾವುದೋ ಒಂದು ವಿಷಯಕ್ಕೆ ಟ್ವೀಟ್ ಮಾಡುವವರನ್ನು ಜೈಲಿಗೆ ಹಾಕ್ತೀರಾ. ಆದರೆ, ಇಂಥ ಮಹಾನ್ ಕವಿಯ ಬಗ್ಗೆ ಅವಹೇಳನ ಮಾಡಿದವನನ್ನು ಸುಮ್ಮನೆ ಬಿಟ್ಟಿದ್ದೀರಿ.
ಕುವೆಂಪು ಅನೇಕರ ಪ್ರೋತ್ಸಾಹದಿಂದ ಕವಿ ಆದರಂತೆ.
ಅವನ ಹಿನ್ನೆಲೆ ಏನು? ಎಂದು ರೋಹಿತ್ ಚಕ್ರವರ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಠ್ಯದಲ್ಲಿ ಕುವೆಂಪು ಬಗ್ಗೆ ಆಗಿರುವ ಅಪಮಾನವನ್ನು ಕೂಡಲೇ ಸರಿಪಡಿಸಬೇಕು. ಇಲ್ಲವಾದರೆ, ಕನ್ನಡಿಗರ ಶಕ್ತಿ ಏನೆಂಬುದನ್ನು ಸರಕಾರ ನೋಡಬೇಕಾಗುತ್ತದೆ ಎಂದು ಕುಮಾರಸ್ವಾಮಿ ಅವರು ನೇರ ಎಚ್ಚರಿಕೆ ಕೊಟ್ಟರು.