Publish Date: Wed, 18 Mar 2026 (20:21 IST)
Updated Date: Wed, 18 Mar 2026 (20:23 IST)
ನವದೆಹಲಿ: ಕಾಂಗ್ರೆಸ್ ಜೊತೆಗಿನ ಮದುವೆ ಹಿಂಸಾತ್ಮಕವಾಗಿತ್ತು. ಹೀಗಾಗಿ ವಿಚ್ಛೇದನ ಪಡೆಯಬೇಕಾಯ್ತು ಎಂದು ರಾಜ್ಯಸಭೆಯಲ್ಲಿ ಇಂದು ಮಲ್ಲಿಕಾರ್ಜುನ ಖರ್ಗೆಗೆ ದೇವೇಗೌಡರು ತಿರುಗೇಟು ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಇಂದು ನಿವೃತ್ತಿ ಹೊಂದುತ್ತಿರುವ ಸದಸ್ಯರಿಗೆ ಬೀಳ್ಕೊಡುಗೆ ಸಮಾರಂಭವಿತ್ತು. ಈ ವೇಳೆ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ ಹಾಸ್ಯ ಮತ್ತು ವ್ಯಂಗ್ಯವಾಗಿ ದೇವೇಗೌಡರು ನಮ್ಮನ್ನು ಪ್ರೀತಿಸಿದರು. ಆದರೆ ನಂತರ ಮೋದಿಯವರನ್ನು ಮದುವೆಯಾದರು ಎಂದಿದ್ದರು.
ಆದರೆ ಖರ್ಗೆ ಮಾತನಾಡುವಾಗ ದೇವೇಗೌಡರು ಇರಲಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಇದಕ್ಕೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಜೊತೆಗಿನ ಮದುವೆ ಹಿಂಸಾತ್ಮಕವಾಗಿತ್ತು. ಹೀಗಾಗಿ ವಿಚ್ಛೇದನ ಪಡೆದೆ ಎಂದಿದ್ದಾರೆ.
2018 ರಲ್ಲಿ ಗುಲಾಂ ನಬಿ ಆಜಾದ್ ಅವರನ್ನು ಕಳುಹಿಸಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ಹೊರಟಾಗ ನಾನು ಖರ್ಗೆ ಹೆಸರು ಸೂಚಿಸಿದ್ದೆ. ಆಗ ಸಿದ್ದರಾಮಯ್ಯ ಕೂಡಾ ಅಲ್ಲೇ ಇದ್ದರು. ಆದರೂ ಆಜಾದ್ ಅವರು ಕುಮಾರಸ್ವಾಮಿ ನೇತೃತ್ವವನ್ನೇ ಬಯಸಿದರು. ಆದರೆ 2019 ರ ಬಳಿಕ ಏನಾಯ್ತು? ಕಾಂಗ್ರೆಸ್ ನ ಎಷ್ಟು ಶಾಸಕರು ಬಿಜೆಪಿಗೆ ಹೋದರು? ಅವರನ್ನು ಕಳುಹಿಸಿದ್ದು ಯಾರು ಎಲ್ಲಾ ಗೊತ್ತಿದೆ. ಹೀಗಾಗಿ ದಾಖಲೆಗಳನ್ನು ನೋಡುವುದಾದರೆ ಅವರೇ ದೂರ ನಡೆದರು. ನನಗೆ ವಿಚ್ಛೇದನ ನೀಡುವುದನ್ನು ಹೊರತುಪಡಿಸಿ ಬೇರೆ ಆಯ್ಕೆ ಇರಲಿಲ್ಲ ಎಂದಿದ್ದಾರೆ.