Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಜೈಪುರ : INDIA ಒಕ್ಕೂಟವು ಹಿಂದೂ ಧರ್ಮವನ್ನ ದ್ವೇಷಿಸುತ್ತಿದೆ, ನಮ್ಮ ಪರಂಪರೆಯ ಮೇಲೆ ದಾಳಿ ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಡುಗಿದ್ದಾರೆ.
ರಾಜಸ್ಥಾನದ ಡುಂಗರ್ಪುರದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಚಾಲನೆ ನೀಡಿ ಮಾತನಾಡಿದ ಶಾ, ಸನಾತನನ ಧರ್ಮವು ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನ ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು ಎಂಬ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಹೇಳಿಯನ್ನ ಖಂಡಿಸಿದ್ದಾರೆ.
ಇಂತಹ ಹೇಳಿಕೆಗಳಿಂದ INDIA ಹಿಂದೂ ಧರ್ಮವನ್ನ ದ್ವೇಷಿಸುತ್ತದೆ ಹಾಗೂ ನಮ್ಮ ಪರಂಪರೆಯ ಮೇಲೆ ದಾಳಿ ಮಾಡುತ್ತಿದೆ ಎಂಬುದನ್ನು ತೋರಿಸುತ್ತದೆ. ಅಲ್ಲದೆ, ಉದಯನಿಧಿ ಅವರ ಈ ಹೇಳಿಕೆಯು ವೋಟ್ ಬ್ಯಾಂಕ್ ರಾಜಕೀಯದ ಭಾಗವಾಗಿದೆ ಎಂದು ಕಿಡಿಕಾರಿದ್ದಾರೆ.
ಐಎನ್ಡಿಐಎ ಒಕ್ಕೂಟ ಈ ದೇಶದ ಪರಂಪರೆ ಹಾಗೂ ಸನಾತನ ಧರ್ಮವನ್ನ ಅವಮಾನಿತ್ತಿದೆ. ಕಾಂಗ್ರೆಸ್ ಮತ್ತು ಡಿಎಂಕೆಯ ಉನ್ನತ ನಾಯಕರು ಮತ ಬ್ಯಾಂಕ್ ರಾಜಕಾರಣಕ್ಕಾಗಿ ಸನಾತನ ಧರ್ಮವನ್ನೇ ಮುಗಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿಂದೆಯೂ ರಾಹುಲ್ ಗಾಂಧಿ ಅವರು, ಲಷ್ಕರ್-ಎ-ತೊಯ್ಬಾಗಿಂತ ಹಿಂದೂ ಸಂಘಟನೆಗಳು ಅಪಾಯಕಾರಿ ಎಂದು ಹೇಳಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸನಾತನ ಧರ್ಮವು ಜನರ ಹೃದಯವನ್ನ ಆಳುತ್ತಿದೆ. ಮೋದಿ ಗೆದ್ದರೆ ಸನಾತನ ಆಡಳಿತವೇ ಬರುತ್ತದೆ, ಸಂವಿಧಾನದ ಹಾದಿಯಲ್ಲೇ ಭಾರತ ಸಾಗುತ್ತದೆ ಎಂದು ಒತ್ತಿ ಹೇಳಿದ್ದಾರೆ.