Publish Date: Thu, 27 Jun 2019 (19:04 IST)
Updated Date: Thu, 27 Jun 2019 (19:09 IST)
ರಾಜ್ಯದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಪಕ್ಷಗಳ ನಡುವೆ ಮಧ್ಯಂತರ ಚುನಾವಣೆಗೆ ತಯಾರಿ ಶುರುವಾಗಿದೆಯಾ? ಹೀಗೊಂದು ಚರ್ಚೆ ಇದೀಗ ಶುರುವಾಗಿದೆ.
ದೋಸ್ತಿ ಪಕ್ಷಗಳ ನಡುವೆ ಶುರುವಾಯ್ತಾ ಮಧ್ಯಂತರ ತಯಾರಿ...? ಎನ್ನುವ ಚರ್ಚೆ ಆರಂಭಗೊಂಡಿದೆ. ಅತ್ತ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ನಡೆಸುತ್ತಿದ್ದರೆ, ಇತ್ತ ಸಿದ್ದರಾಮಯ್ಯ ಅಹಿಂದ ಸಮಾವೇಶ ಆಯೋಜಿಸುತ್ತಿದ್ದಾರೆ.
ಅಹಿಂದ ಸಮಾವೇಶಕ್ಕೆ ಚಾಲನೆ ನೀಡುತ್ತಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ. ಮೈಸೂರಿನಿಂದಲೇ ಮೊದಲ ಅಹಿಂದ ಸಮಾವೇಶ ಆರಂಭಿಸಲು ಚಿಂತನೆ ನಡೆದಿದೆ. ನಂತರ ರಾಜ್ಯದ 4 ಕಡೆ ಅಹಿಂದ ಸಮಾವೇಶಕ್ಕೆ ಸಿದ್ಧತೆ ನಡೆಯಲಿವೆ.
ಹಳೆ ಮೈಸೂರು ಭಾಗಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ಈ ಭಾಗದಲ್ಲಿ ಕೈ ಮತಗಳನ್ನೆಲ್ಲ ಜೆಡಿಎಸ್ ಸೆಳೆದುಕೊಂಡಿದೆ.
ಇದನ್ನು ವಾಪಸ್ ಪಡೆಯಬೇಕೆಂದರೆ ಅಹಿಂದ ಸಮಾವೇಶ ನಡೆಸಬೇಕು. ಹಳೆ ಮೈಸೂರು ಭಾಗದಿಂದಲೇ ಅಹಿಂದ ಮತಗಳ ಕ್ರೋಢೀಕರಣವಾಗಬೇಕು. ಮೈತ್ರಿಯಿಂದ ಆಗಿರುವ ನಷ್ಟವನ್ನು ಭರ್ತಿ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಕೈ ಪಡೆ ನಾಯಕರು ಮುಳುಗಿದ್ದಾರೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಿರುವ ಸಿದ್ದರಾಮಯ್ಯ, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ ಭಾಗಗಳಲ್ಲಿಯೂ ಅಹಿಂದ ಸಮಾವೇಶ ನಡೆಸಲಿದ್ದಾರೆ.