Publish Date: Sun, 04 Aug 2019 (11:46 IST)
Updated Date: Sun, 04 Aug 2019 (11:48 IST)
ಬೆಂಗಳೂರು : ಯಾವುದೇ ಕಾರಣಕ್ಕೂ ಇನ್ನೊಮ್ಮೆ ಕಾಂಗ್ರೆಸ್ ಕಡೆ ತಿರುಗಿಯೂ ನೋಡುವುದಿಲ್ಲ. ಕಾಂಗ್ರೆಸ್ ಸೇರುವುದು ಕನಸಿನ ಮಾತು ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿದ್ದ ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಉಪ ಚುನಾವಣೆ ಬಗ್ಗೆ ಕಾಂಗ್ರೆಸ್ ಏನು ಮಾಡುತ್ತಿದೆ ಎಂದು ನಮಗೆ ಗೊತ್ತು. ನಾವು ಅಭಿವೃದ್ಧಿ ದೃಷ್ಟಿಯಿಂದ ರಾಜೀನಾಮೆ ನೀಡಿದ್ದೇವೆ. ನಾವು ಮತ್ತೆ ಚುನಾವಣೆಯಲ್ಲಿ ಸ್ಫರ್ಧೆ ಮಾಡಿ ಗೆಲ್ಲುತ್ತೇನೆ. ಬಿಜೆಪಿ ಸೇರ್ಪಡೆಗೆ ಬಗ್ಗೆ ಕ್ಷೇತ್ರದ ಮತದಾರರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಇನ್ನೊಮ್ಮೆ ಕಾಂಗ್ರೆಸ್ ಕಡೆ ತಿರುಗಿಯೂ ನೋಡುವುದಿಲ್ಲ ಎಂದು ಹೇಳಿದ್ದಾರೆ.
ಹಾಗೇ ಮಾಜಿ ಸ್ಪೀಕರ್ ರಮೇಶ್ ಕುಮಾರ ವಿರುದ್ಧ ಕಿಡಿಕಾರಿದ ಅವರು, ರಮೇಶ್ ಕುಮಾರ್ ಅವರು ಕೆಲವರ ಮಾತು ಕೇಳಿ ಏಕಪಕ್ಷೀಯವಾಗಿ ಆದೇಶ ನೀಡಿದ್ದಾರೆ. ಇದರಿಂದ ನಾವು ವಿಚಲಿತರಾಗಿಲ್ಲ. ಸುಪ್ರೀಂಕೋರ್ಟ್ನಲ್ಲಿ ನ್ಯಾಯಕ್ಕಾಗಿ ಮೊರೆಹೋಗಿದ್ದೇವೆ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುವ ನಂಬಿಕೆಯಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಏನು ಬೇಕಾದರೂ ಮಾಡಲಿ. ಕಾಂಗ್ರೆಸ್ನವರು ಮಾಡಿರುವ ಅನರ್ಹತೆಯನ್ನು ಮತದಾರರು ಅರ್ಹತೆಯಾಗಿ ಬದಲಿಸುತ್ತಾರೆಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದ್ದಾರೆ.